ADVERTISEMENT

ವೈಫಲ್ಯಗಳ ಬಗ್ಗೆ ಕಡಿಮೆ ಸಹನೆ ಹೊಂದಿದ್ದ ರವಿ ಶಾಸ್ತ್ರಿ: ದಿನೇಶ್ ಕಾರ್ತಿಕ್

ಪಿಟಿಐ
Published 17 ಆಗಸ್ಟ್ 2022, 10:42 IST
Last Updated 17 ಆಗಸ್ಟ್ 2022, 10:42 IST
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್   

ನವದೆಹಲಿ: ಆಟಗಾರರು ವಿಶೇಷವಾದದ್ದನ್ನು ಸಾಧಿಸಲು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ವೈಫಲ್ಯಗಳ ಬಗ್ಗೆ ಅವರು ಕಡಿಮೆ ಸಹನೆ ಹೊಂದಿದ್ದರು ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಶಾಸ್ತ್ರಿ ಅವರು ಕೋಚ್ ಆಗಿದ್ದಾಗ, ವಿಶೇಷವಾಗಿ 2019ರ ವಿಶ್ವಕಪ್ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಕಾರ್ತಿಕ್ ಆಡಿದ್ದರು.

ಶಾಸ್ತ್ರಿ ಅವರು ಕೋಚ್ ಆಗಿದ್ದು, ವಿರಾಟ್ ಕೊಹ್ಲಿ ನಾಯಕನಾಗಿದ್ದ ಅವಧಿಯು ಭಾರತ ತಂಡಕ್ಕೆ ಬಹಳ ಉತ್ತಮವಾಗಿತ್ತು. ಆದಾಗ್ಯೂ, ಕೆಲವು ಆಟಗಾರರ ಬಗ್ಗೆ ಕಠಿಣ ನಿಲುವು ತಳೆದ ಬಗ್ಗೆ ಶಾಸ್ತ್ರಿ–ಕೊಹ್ಲಿ ಜೋಡಿ ಟೀಕೆಗೆ ಒಳಗಾಗಿತ್ತು.

‘ನಿರ್ದಿಷ್ಟ ವೇಗದಲ್ಲಿ ಬ್ಯಾಟ್ ಮಾಡದವರನ್ನು, ನೆಟ್ಸ್‌ನಲ್ಲಿ ಮತ್ತು ಪಂದ್ಯಗಳಲ್ಲಿ ಭಿನ್ನವಾಗಿ ಪ್ರದರ್ಶನ ನೀಡುವವರನ್ನು ಅವರು (ಶಾಸ್ತ್ರಿ) ಇಷ್ಟಪಡುತ್ತಿರಲಿಲ್ಲ’ ಎಂದು ‘ಕ್ರಿಕ್‌ಬಜ್’ನ ಡಾಕ್ಯೂ ಸೀರೀಸ್ ‘ಸಮ್ಮರ್ ಸ್ಟೇಲ್‌ಮೇಟ್’ನಲ್ಲಿ ಕಾರ್ತಿಕ್ ಹೇಳಿದ್ದಾರೆ.

‘ತಂಡಕ್ಕೆ ಏನು ಬೇಕು, ತಂಡ ಹೇಗೆ ಆಡಬೇಕು ಎಂಬುದು ಅವರಿಗೆ ನಿಖರವಾಗಿ ತಿಳಿದಿತ್ತು. ಆದರೆ, ವೈಫಲ್ಯಗಳ ಬಗ್ಗೆ ಕಡಿಮೆ ಸಹನೆ ಹೊಂದಿದ್ದರು. ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ಹುರಿದುಂಬಿಸುತ್ತಿದ್ದರು’ ಎಂದು ಕಾರ್ತಿಕ್ ತಿಳಿಸಿದ್ದಾರೆ.

ರೋಹಿತ್ ಶರ್ಮಾ (ಟೀಮ್ ಇಂಡಿಯಾ ನಾಯಕ) – ರಾಹುಲ್ ದ್ರಾವಿಡ್ (ಮುಖ್ಯ ಕೋಚ್) ನೇತೃತ್ವದ ತಂಡದಲ್ಲಿ ಹೆಚ್ಚು ಸುರಕ್ಷಿತ ಹಾಗೂ ನಿರಾಳ ಭಾವದಿಂದ ಇರುವುದಾಗಿಯೂ ಅವರು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಕಳೆದ ಹಲವು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಅತ್ಯುತ್ತಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.