ADVERTISEMENT

'ಮೆಂಟರ್' ಸಿಂಗ್ ಧೋನಿ ಈಸ್ ಬ್ಯಾಕ್; ಅಭಿಮಾನಿಗಳ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 10:02 IST
Last Updated 18 ಅಕ್ಟೋಬರ್ 2021, 10:02 IST
ಟೀಮ್ ಇಂಡಿಯಾ ಕ್ಯಾಂಪ್ ಸೇರಿದ ಮಹೇಂದ್ರ ಸಿಂಗ್ ಧೋನಿ
ಟೀಮ್ ಇಂಡಿಯಾ ಕ್ಯಾಂಪ್ ಸೇರಿದ ಮಹೇಂದ್ರ ಸಿಂಗ್ ಧೋನಿ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಮಾರ್ಗದರ್ಶಕರಾಗಿ ನೇಮಕವಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ದುಬೈಯಲ್ಲಿ ತಂಡವನ್ನು ಸೇರಿಕೊಂಡರು.

ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದೆ. ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರೊಂದಿಗೆ ಧೋನಿ ಸಮಾಲೋಚನೆ ನಡೆಸುತ್ತಿರುವ ಚಿತ್ರವನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

ಅತ್ತ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 4ನೇ ಪ್ರಶಸ್ತಿ ದೊರಕಿಸಿಕೊಟ್ಟಿರುವ ಮಹಿ ಸಾನಿಧ್ಯದೊಂದಿಗೆ ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ಮೂಲಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

ಕಳೆದ ವರ್ಷ ಪ್ಲೇ-ಆಫ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾಗಿರುವ ಚೆನ್ನೈ ತಂಡವನ್ನು ಮತ್ತೆ ಕಟ್ಟಿ ಬೆಳೆಸಿ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿರುವ ಧೋನಿ ನಾಯಕತ್ವ ಕೌಶಲ್ಯವು ನಿಜಕ್ಕೂ ಪ್ರಶಂಸನೀಯ.

ಟ್ರೋಫಿ ಗೆದ್ದ ಬಳಿಕ ಚೆನ್ನೈ ತಂಡದ ಸಂಭ್ರಮ ಆಚರಣೆಯ ಮುನ್ನವೇ ಧೋನಿ ಟೀಮ್ ಇಂಡಿಯಾ ಕ್ಯಾಂಪ್ ಸೇರಿದ್ದಾರೆ. ಟೀಮ್ ಇಂಡಿಯಾದಲ್ಲಿ ಕರ್ತವ್ಯಕ್ಕಾಗಿ ಸಂಭಾವನೆ ಕೂಡ ಪಡೆಯುತ್ತಿಲ್ಲ ಎಂಬುದು ಧೋನಿ ಮೇಲಿನ ಅಭಿಮಾನಿಗಳ ಪ್ರೀತಿಯನ್ನು ಇಮ್ಮಡಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.