ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯ ಜತಿನ್ ಪರಾಂಜಪೆ (ಪಶ್ಚಿಮ ವಲಯ) ಅವರಿಂದ ತೆರವಾಗಿರುವ ಸ್ಥಾನಕ್ಕಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಬೇ ಕುರುವಿಲ್ಲಾ ಅವರು ಅರ್ಜಿ ಸಲ್ಲಿಸಿದ್ದಾರೆ.
ಈ ಸ್ಥಾನಕ್ಕಾಗಿ ಮಾಜಿ ವೇಗಿ ಅಜಿತ್ ಅಗರ್ಕರ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಅಬೇ ಕಣಕ್ಕಿಳಿದಿರುವುದರಿಂದ ಮುಂಬೈ ಮೂಲದ ಈ ಇಬ್ಬರ ನಡುವೆ ನಿಕಟ ಸ್ಪರ್ಧೆ ಏರ್ಪಡಲಿದೆ. ಮಾಜಿ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಅವರೂ ರೇಸ್ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
53 ವರ್ಷದ ಕುರುವಿಲ್ಲಾ 10 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 2008 ರಿಂದ 2012ರ ವರೆಗೆ ಜೂನಿಯರ್ ತಂಡದ ಆಯ್ಕೆ ಸಮಿತಿಯಲ್ಲಿದ್ದರು ಹಾಗೂ 2012ರಲ್ಲಿ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಅದೇ ವರ್ಷ ಮುಂಬೈ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕವಾಗಿದ್ದರು.
ಮದನ್ ಲಾಲ್ ನೇತೃತ್ವ ಹಾಗೂ ಆರ್ಪಿ ಸಿಂಗ್, ಸುಲಕ್ಷಣಾ ನಾಯಕ್ ಅವರಿರುವ ಸಲಹಾ ಸಮಿತಿಯು ಆಯ್ಕೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಿದೆ. ಎಂಎಸ್ಕೆ ಪ್ರಸಾದ್ ಅವರಿಂದ ತೆರವಾಗಿದ್ದ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಮಾರ್ಚ್ ತಿಂಗಳಲ್ಲಿ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು ನೇಮಕ ಮಾಡಲಾಗಿತ್ತು. ಅದೇ ವೇಳೆ ಮಾಜಿ ಆಟಗಾರ ಹರ್ವಿಂದರ್ ಸಿಂಗ್ ಅವರೂ ಸಮಿತಿ ಕೂಡಿಕೊಂಡಿದ್ದರು.
ಐದು ಸದಸ್ಯ ಬಲದ ಸಮಿತಿಯ ಉಳಿದೆರಡು ಸ್ಥಾನಗಳಿಗಾಗಿ ಮಾಜಿ ಆಟಗಾರರಾದ ಚೇತನ್ ಶರ್ಮಾ (ಉತ್ತರ ವಲಯ), ಶಿವಸುಂದರ್ ದಾಸ್ (ಪೂರ್ವ ವಲಯ) ಸ್ಪರ್ಧೆಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.