ನವದೆಹಲಿ: ‘ಕುಟುಂಬ ತುರ್ತು ಕಾರಣ’ ಹೋದ ವಾರ ತವರಿಗೆ ಮರಳಿದ್ದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮಂಗಳವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ.
ಜೂನ್ 11ರಂದು ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಅವರಿಗೆ ಹೃದಯಾಘಾತ ಆಗಿತ್ತು. ಹಾಗಾಗಿ, 12ರಂದು ಗಂಭೀರ್ ಅವರು ಕುಟುಂಬದವರೊಂದಿಗೆ ಲಂಡನ್ನಿಂದ ದೆಹಲಿಗೆ ಮರಳಿದ್ದರು.
ಗಂಭೀರ್ ಅವರ ತಾಯಿ ಆರೋಗ್ಯದಿಂದಿದ್ದಾರೆ. ಅವರು ಮಂಗಳವಾರ ದೆಹಲಿಯಿಂದ ಲಂಡನ್ಗೆ ಪ್ರಯಾಣ ಬೆಳೆಸಲಿದ್ದು, ತಂಡದೊಂದಿಗೆ ಮಂಗಳವಾರವೇ ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ತಂಡಕ್ಕೆ ಸಿದ್ಧತೆಯಾಗಿ ಭಾರತ ‘ಎ’ ತಂಡದ ಜೊತೆ ಬೆಕೆನ್ಹ್ಯಾಮ್ನಲ್ಲಿ ಭಾನುವಾರ ಮುಕ್ತಾಯಗೊಂಡ ಇಂಟ್ರಾ ಸ್ಕ್ವಾಡ್ ಪಂದ್ಯಕ್ಕೆ ಗಂಭೀರ್ ಅವರು ಲಭ್ಯರಿಲಿಲ್ಲ. ಸಹಾಯಕ ಕೋಚ್ ರಿಯಾನ್ ಟೆನ್ ಡೋಸೆಟ್, ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮೇಲ್ವಿಚಾರಣೆಯಲ್ಲಿ ಮೂರು ದಿನಗಳ ಪಂದ್ಯ ನಡೆದಿತ್ತು.
ಶುಭಮನ್ ಗಿಲ್ ನೇತೃತ್ವದ ಭಾರತ ತಂಡ 2007ರ ನಂತರ ಇಂಗ್ಲೆಂಡ್ನಲ್ಲಿ ಮೊದಲ ಸಲ ಸರಣಿ ಗೆಲುವಿನ ಗುರಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.