ನವದೆಹಲಿ: ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಸೋಮವಾರ ಬಿಸಿಸಿಐ ನೀತಿ ಅಧಿಕಾರಿಗ ಸಮ್ಮುಖ ವಿಚಾರಣೆಗೆ ಹಾಜರಾದರು.
‘ವಿಚಾರಣೆ ಮುಗಿದಿದೆ. ಶೀಘ್ರದಲ್ಲಿಯೇ ತೀರ್ಮಾನವನ್ನು ಪ್ರಕಟಿಸಲಾಗುವುದು ನಿರೀಕ್ಷಿಸಿರಿ’ ಎಂದು ನೀತಿ ಅಧಿಕಾರಿ ಡಿ.ಕೆ. ಜೈನ್ ತಿಳಿಸಿದ್ದಾರೆ.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದೂರು ನೀಡಿದ್ದರು. ರಾಹುಲ್ ಅವರು ಇಂಡಿಯಾ ಸಿಮೆಂಟ್ಸ್ನಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿ. ಆದರೂ ಅವರಿಗೆ ಎನ್ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಎಂದು ಗುಪ್ತಾ ದೂರಿದ್ದರು. ಅದಕ್ಕಾಗಿ ಹೋದ ತಿಂಗಳು ದ್ರಾವಿಡ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ವಿಚಾರಣೆಗೆ ಕರೆಯಲಾಗಿತ್ತು. 46 ವರ್ಷದ ದ್ರಾವಿಡ್ ಅವರು ತಮ್ಮ ವಕೀಲರೊಂದಿಗೆ ಹಾಜರಾಗಿದ್ದರು.
‘ಮೊದಲ ವಿಚಾರಣೆಯ ನಂತರ ಉಂಟಾಗಿದ್ದ ಕೆಲವು ಸಂದೇಹಗಳನ್ನು ನಿವಾರಿಸಿಕೊಳ್ಳಲು ಮತ್ತೊಮ್ಮೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ದೂರುದಾರರ ಮತ್ತು ಬಿಸಿಸಿಐ ಪರ ವಕೀಲರೂ ಹಾಜರಿದ್ದರು. ಅವರಿಂದಲೂ ಹೇಳಿಕೆಗಳನ್ನು ಪಡೆಯಲಾಯಿತು’ ಎಂದು ಜೈನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.