ADVERTISEMENT

ಆರ್‌ಸಿಬಿಗೆ ಜೈಕಾರ ಹಾಕಿದ ಅಭಿಮಾನಿಗಳಿಗೆ ಬುದ್ಧಿ ಹೇಳಿದ ಕೊಹ್ಲಿ; ಏನಿದು ಘಟನೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2022, 14:09 IST
Last Updated 24 ಸೆಪ್ಟೆಂಬರ್ 2022, 14:09 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ 'ಆರ್‌ಸಿಬಿ ಆರ್‌ಸಿಬಿ' ಎಂದು ಜೈಕಾರ ಕೂಗಿದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬುದ್ಧಿವಾದ ಹೇಳಿದ ಘಟನೆ ನಡೆದಿದೆ.

ಏನಿದು ಘಟನೆ?
ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿತ್ತು. ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ಕೊಠಡಿಯಲ್ಲಿ ಪಂದ್ಯ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದರು.

ಈ ವೇಳೆ ಪಂದ್ಯ ವೀಕ್ಷಿಸಲು ಆಗಮಿಸಿದ ಅಭಿಮಾನಿಗಳ ಗುಂಪೊಂದು ಆರ್‌ಸಿಬಿ ಆರ್‌ಸಿಬಿ ಎಂದು ಜೈಕಾರವನ್ನು ಕೂಗಿದ್ದರು.

ಇದನ್ನು ಗಮನಿಸಿದ ಕೊಹ್ಲಿ, ವಿಚಲಿತಗೊಂಡಿದ್ದರಲ್ಲದೆ ತಕ್ಷಣವೇ ತಮ್ಮ ಜೆರ್ಸಿಯಲ್ಲಿರುವ ಲೋಗೊ ತೋರಿಸುತ್ತಾ ತಾವು ಭಾರತವನ್ನು ಪ್ರತಿನಿಧಿಸುತ್ತಿದ್ದು, ಫ್ರಾಂಚೈಸಿಯನ್ನಲ್ಲ ಎಂದು ನೆನಪಿಸಿದರು.

ವಿರಾಟ್ ಸಮೀಪದಲ್ಲೇ ಇದ್ದ ಹರ್ಷಲ್ ಪಟೇಲ್ ಕೂಡ, ಲಾಂಛನವನ್ನು ತೋರಿಸುತ್ತಾ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಸನ್ನೆ ಮಾಡಿದರು. ಇದಾದ ಬಳಿಕ ಅಭಿಮಾನಿಗಳು ಕೊಹ್ಲಿ ಹಾಗೂ ಭಾರತದ ಪರ ಜೈಕಾರವನ್ನು ಕೂಗಿದರು.

ಏತನ್ಮಧ್ಯೆ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.