ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡದ ಯಶಸ್ಸಿನಿಂದ ನಾವೆಲ್ಲರೂ ಸಂಭ್ರಮಿಸಿದ್ದೇವೆ. ಅವರ ಗಮನಾರ್ಹ ಸಾಮರ್ಥ್ಯ ಮತ್ತು ಉತ್ಸಾಹವು ಸರಣಿಯುದ್ದಕ್ಕೂ ಗೋಚರಿಸಿತು. ಹಾಗೆಯೇ ಅವರ ಉದ್ದೇಶ, ಸ್ಥೈರ್ಯ ಹಾಗೂ ದೃಢ ನಿಶ್ಚಯ ಕೂಡ. ತಂಡಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೂ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಸರಣಿಯ ಮೊದಲ ಪಂದ್ಯವನ್ನು ಹೀನಾಯವಾಗಿದ್ದ ಸೋತಿದ್ದ ಭಾರತ, ಎರಡನೇ ಪಂದ್ಯವನ್ನು ಗೆದ್ದು ತಿರುಗೇಟು ನೀಡಿತ್ತು. ಮೂರನೇ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡರೆ ನಾಲ್ಕನೇ ಪಂದ್ಯವನ್ನು ಅಜಿಂಕ್ಯ ರಹಾನೆ ಪಡೆ ಗೆದ್ದುಕೊಂಡಿದೆ.
ಮೊದಲ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದರು. ಮಾತ್ರವಲ್ಲದೆ ಭುವನೇಶ್ವರ್ ಕುಮಾರ್, ಮೊಹಮದ್ ಶಮಿಯಂತಹ ಪ್ರಮುಖ ಆಟಗಾರರು ಅಲಭ್ಯರಾಗಿದ್ದರು. ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಆರ್. ಅಶ್ವಿನ್ ಅವರೂ ಗಾಯದ ಸಮಸ್ಯೆಯಿಂದಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದರ ನಡುವೆಯೂ ಅಜಿಂಕ್ಯ ರಹಾನೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.