ADVERTISEMENT

ವಿರಾಟ್, ರವಿ ಬಯಸಿದ್ದಲ್ಲಿ ನಿರ್ದಿಷ್ಟ ಆಟಗಾರರಿಗೆ ಅವಕಾಶ ನೀಡಲು ಸಿದ್ಧ: ಧವನ್

ಪಿಟಿಐ
Published 18 ಜುಲೈ 2021, 6:55 IST
Last Updated 18 ಜುಲೈ 2021, 6:55 IST
ಶಿಖರ್ ಧವನ್
ಶಿಖರ್ ಧವನ್   

ಕೊಲಂಬೊ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಮ್ ಇಂಡಿಯಾದ ಕಾಯಂ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಬಯಸಿದ್ದಲ್ಲಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಯಾವುದೇ ನಿರ್ದಿಷ್ಟ ಆಟಗಾರರಿಗೆ ಅವಕಾಶ ನೀಡಲು ಸಿದ್ಧವಿರುವುದಾಗಿ ನಾಯಕ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಇನ್ನೊಂದೆಡೆ ಧವನ್ ನೇತೃತ್ವದಲ್ಲಿ ಯುವ ತಂಡವು ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸುತ್ತಿದೆ. ಮೊದಲ ಏಕದಿನ ಪಂದ್ಯವು ಇಂದು (ಭಾನುವಾರ) ನಡೆಯಲಿದೆ.

ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯುವ ಪಡೆಯು ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಉತ್ತಮ ಅವಕಾಶ ಒದಗಿ ಬಂದಿದೆ.

'ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ರವಿಶಾಸ್ತ್ರಿ ಜೊತೆ ನಾನು ಯಾವುದೇ ನಿರ್ದಿಷ್ಟ ಚರ್ಚೆಯನ್ನು ನಡೆಸಿಲ್ಲ. ಆದರೆ ಅವರು ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆದಾರರದೊಂದಿಗೆ ಚರ್ಚೆ ನಡೆಸಿರಬಹುದು ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ' ಎಂದು ಧವನ್ ತಿಳಿಸಿದರು.

'ಈ ಸರಣಿಯನ್ನುವಿಶ್ವಕಪ್ ಗಮನದಲ್ಲಿಟ್ಟುಕೊಂಡು ಆಡಲಾಗುವುದು. ಒಂದು ವೇಳೆ ಆಯ್ಕೆದಾರರು, ರವಿ ಹಾಗೂ ವಿರಾಟ್, ಕೆಲವು ಆಟಗಾರರನ್ನು ಪರೀಕ್ಷಿಸಲು ಬಯಸಿದ್ದಲ್ಲಿಅದಕ್ಕೆ ಅವಕಾಶ ಕಲ್ಪಿಸಲಾಗುವುದು. ಏಕೆಂದರೆ ಇದು ವಿಶ್ವಕಪ್‌ಗೂ ಮೊದಲು ನಮ್ಮ ಮುಂದಿರುವ ಏಕೈಕ ಸರಣಿಯಾಗಿದೆ' ಎಂದಿದ್ದಾರೆ.

ಆದರೂ ಆಡುವ ಬಳಗದಲ್ಲಿ ಯಾವೆಲ್ಲ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಧವನ್ ಮುಂದಾಳತ್ವದ ಭಾರತ ತಂಡದಲ್ಲಿ ಆರು ಮಂದಿ ಆಟಗಾರರು ಇನ್ನಷ್ಟೇ ಪದಾರ್ಪಣೆ ಮಾಡಬೇಕಿದೆ.

ಹಾಗಿದ್ದರೂ ಸರಣಿ ಗೆಲುವೇ ತಂಡದ ಪ್ರಮುಖ ಗುರಿ ಎಂಬುದನ್ನು ಧವನ್ ಸ್ಪಷ್ಟಪಡಿಸಿದರು. ಇದಕ್ಕಾಗಿ ಪ್ರಯೋಗದ ಹೆಸರಲ್ಲಿ ಯಾವ ರಾಜಿಗೂ ಸಿದ್ಧವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.