ADVERTISEMENT

IND vs WI: ವಿಂಡೀಸ್‌ಗೆ ‘ಸೂರ್ಯ’ ಆಘಾತ; ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 20:56 IST
Last Updated 2 ಆಗಸ್ಟ್ 2022, 20:56 IST
   

ಸೇಂಟ್‌ ಕಿಟ್ಸ್‌: ಸೂರ್ಯಕುಮಾರ್‌ ಯಾದವ್‌ (74 ರನ್, 44 ಎ.) ಅವರ ಅಬ್ಬರದ ಆಟದ ಬಲದಿಂದ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿವೆಸ್ಟ್‌ಇಂಡೀಸ್‌ ಎದುರು ಏಳು ವಿಕೆಟ್ ಅಂತರದ ಜಯ ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164 ರನ್‌ ಗಳಿಸಿತು. ಭಾರತ ತಂಡವು ಇನ್ನೂ ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ರೋಹಿತ್ಶರ್ಮಬಳಗಈ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರ ಮುನ್ನಡೆ ಸಾಧಿಸಿದೆ.

ADVERTISEMENT

ಗುರಿ ಬೆನ್ನಟ್ಟಿದ ಭಾರತ ತಂಡದ ಮೊತ್ತ 19 ಆಗಿದ್ದಾಗ ರೋಹಿತ್‌ (11 ರನ್‌) ಅವರು ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಪೆವಿಲಿಯನ್‌ಗೆ ಮರಳಿದರು. ಸೂರ್ಯಕುಮಾರ್‌ ಮತ್ತು ಶ್ರೇಯಸ್‌ ಅಯ್ಯರ್‌ (24 ರನ್‌, 27 ಎ.) ಅವರು 86 ರನ್‌ ಜತೆಯಾಟ ನೀಡಿದರು.

ವಿಂಡೀಸ್‌ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸೂರ್ಯಕುಮಾರ್‌ 8 ಬೌಂಡರಿ ಮತ್ತು 4 ಸಿಕ್ಸರ್‌ ಹೊಡೆದರು. ಡೊಮಿನಿಕ್‌ ಡ್ರೇಕ್ಸ್‌ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದರು.

ರಿಷಭ್‌ ಪಂತ್ ಔಟಾಗದೆ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೀಪಕ್ ಹೂಡಾ ಅಜೇಯ 10 ಹಾಗೂ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು.

ಮೇಯರ್ಸ್‌ ಆಸರೆ: ಮೊದಲು ಬ್ಯಾಟ್‌ ಮಾಡಿದ್ದವೆಸ್ಟ್‌ಇಂಡೀಸ್ಕೈಲ್‌ ಮೇಯರ್ಸ್‌ (73) ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತ್ತು.

50 ಎಸೆತಗಳನ್ನು ಎದುರಿಸಿದ ಮೇಯರ್ಸ್‌ 8 ಬೌಂಡರಿ ಮತ್ತು 4 ಸಿಕ್ಸರ್‌ ಹೊಡೆದರು. ಬ್ರೆಂಡನ್‌ ಕಿಂಗ್‌ (20 ರನ್‌, 20 ಎ.) ಜತೆ ಮೊದಲ ವಿಕೆಟ್‌ಗೆ 57 ರನ್‌ ಹಾಗೂ, ನಾಯಕ ನಿಕೊಲಸ್‌ ಪೂರನ್‌ (22ರನ್, 23 ಎ.) ಎರಡನೇ ವಿಕೆಟ್‌ಗೆ 50 ರನ್‌ ಸೇರಿಸಿ ಅವರು ತಂಡಕ್ಕೆ ಆಸರೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.