ಕೇನ್ ವಿಲಿಯಮ್ಸನ್
(ರಾಯಿಟರ್ಸ್ ಚಿತ್ರ)
ಲಾಹೋರ್: ದುಬೈನಲ್ಲಿ ಆಡುವ ಕುರಿತು ಭಾರತ ತಂಡಕ್ಕೆ ಸ್ಪಷ್ಟತೆ ಇದೆ. ನಾವು ಕೂಡ ಇಲ್ಲಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಾಹೋರ್ನಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಆಡಿದ್ದೆವು. ಆದ್ದರಿಂದ ನಮಗೂ ಇಲ್ಲಿಯ ವಾತಾವಾರಣ ಮತ್ತು ಸ್ಥಿತಿ ಗತಿಗಳಿಗೆ ಹೊಂದಿಕೊಳ್ಳುವುದು ಅನುಕೂಲವಾಯಿತು ಎಂದು ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಹೇಳಿದರು.
ಬುಧವಾರ ದಕ್ಷಿಣ ಆಫ್ರಿಕಾ ಎದುರು ನಡೆದ ಸೆಮಿಫೈನಲ್ನಲ್ಲಿ ಕೇನ್ ಶತಕ ಗಳಿಸಿದ್ದರು. ಪಂದ್ಯದಲ್ಲಿ ತಂಡವು ಜಯಿಸಿದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
‘ನಾನು ಕೂಡ ಅಲ್ಲಿ (ದುಬೈ) ಕೆಲವು ಪಂದ್ಯಗಳನ್ನು ಆಡಿದ್ದೇನೆ. ಆದರೂ ಅವರು ಹೇಗೆ ಆಡಲಿದ್ದಾರೆ ಎಂಬ ಸ್ಪಷ್ಟತೆ ಪೂರ್ಣವಾಗಿ ಗೊತ್ತಾಗಲ್ಲ. ನಮ್ಮ ಗಮನ ಏನಿದ್ದರೂ ಪಂದ್ಯದ ಮೇಲಷ್ಟೇ. ಸ್ಥಳ ಮತ್ತು ತಂಡಗಳು ಅದರ ಪ್ರಮುಖ ಅಂಶಗಳಷ್ಟೇ’ ಎಂದರು.
‘ಫೈನಲ್ ಪಂದ್ಯವೆಂದರೆ ರೋಚಕವಾಗಿರುತ್ತದೆ. ನಮ್ಮ ಆಟಗಾರರೂ ಭಾರತಕ್ಕೆ ದಿಟ್ಟ ಉತ್ತರ ನೀಡಲು ಸಿದ್ಧರಾಗಿದ್ದಾರೆ. ರಚಿನ್ ರವೀಂದ್ರ ಕಳೆದ 3 ಪಂದ್ಯಗಳಿಂದ 2 ಶತಕ ದಾಖಲಿಸಿದ್ದಾರೆ. ಅವರಲ್ಲಿ ಅಪಾರವಾದ ಪ್ರತಿಭೆ ಇದೆ’ ಎಂದು ಹೇಳಿದರು.
ಪಿಚ್ಗೆ ಹೊಂದಿಕೊಳ್ಳಬೇಕು: ‘ದುಬೈನಲ್ಲಿರುವ ಪಿಚ್ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲ. ಗುಂಪು ಹಂತದ ಪಂದ್ಯವನ್ನು ಆಲ್ಲಿ ಆಡಿದ್ದೆವು. ಆಗ ಪಿಚ್ನಲ್ಲಿ ಚೆಂಡು ಒಂದಷ್ಟು ತಿರುವು ಪಡೆಯುವುದನ್ನು ಗಮನಿಸಿದ್ದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಆಡುವುದಕ್ಕೆ ನಮ್ಮ ಆದ್ಯತೆ’ ಎಂದು ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಹೇಳಿದರು.
ಗುಂಪು ಹಂತದ ಪಂದ್ಯದಲ್ಲಿ ರಚಿನ್ ಅವರು ಕೇವಲ 6 ರನ್ ಗಳಿಸಿ ಔಟಾಗಿದ್ದರು.
‘ಫೈನಲ್ನಲ್ಲಿ ನಾನು ದೀರ್ಘ ಇನಿಂಗ್ಸ್ ಆಡುವ ಪ್ರಯತ್ನ ಮಾಡುತ್ತೇನೆ. ನಾವು ಮಾಡಿಕೊಂಡಿರುವ ಸಿದ್ಧತೆಗಳು ತೃಪ್ತಿಕರವಾಗಿವೆ. ಫೈನಲ್ ಪಂದ್ಯ ನಮಗೆ ಹೊಸ ಸವಾಲು. ಅದನ್ನು ಎದುರಿಸಲು ಸ್ಥಿತಿ–ಗತಿಗೆ ಹೊಂದಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.