ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಬಾಂಗ್ಲಾದೇಶದ ಎದುರು ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದೆ. ಇಲ್ಲಿನ್ ಪಿಚ್ ಸ್ಪಿನ್ ಬೌಲರ್ಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಭಾರತ ಸೆಮಿಫೈನಲ್ ಹಂತಕ್ಕೇರುವ ಕನಸು ಜೀವಂತವಾಗಿರಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಂದು ಭಾರತ ತಂಡದಲ್ಲಿ ಮೇಘನಾ ಸಿಂಗ್ ಬದಲು ಪೂನಮ್ ಯಾದವ್ ಕಣಕ್ಕಿಳಿದಿದ್ದಾರೆ.
ಆರಂಭಿಕ ಜೋಡಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಬ್ಯಾಟಿಂಗ್ ನಡೆಸಿದ್ದಾರೆ. 6.3 ಓವರ್ಗಳಲ್ಲಿ 22 ರನ್ ಕಲೆ ಹಾಕಿದ್ದಾರೆ.
ಪಾಕಿಸ್ತಾನವನ್ನು ಮಣಿಸಿ ಉತ್ತಮ ಆರಂಭ ಕಂಡಿದ್ದ ಭಾರತ ನಂತರ ಏಕೈಕ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಿನ ಸತತ ಸೋಲು ಸೇರಿದಂತೆ ಮೂರು ಪಂದ್ಯಗಳಲ್ಲಿ ನಿರಾಸೆ ಕಂಡಿದೆ.
ಬಾಂಗ್ಲಾದೇಶ ಪ್ರತಿ ಪಂದ್ಯದಲ್ಲೂ ಹೋರಾಡಿ ಸೋತಿದೆ. ಆದ್ದರಿಂದ ಆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪಾಕಿಸ್ತಾನದ ವಿರುದ್ಧ ಗೆದ್ದು ಟೂರ್ನಿಯನ್ನು ಸ್ಮರಣೀಯವಾಗಿಸಿದೆ.
ಭಾರತದ ಬ್ಯಾಟಿಂಗ್ ಬಳಗದ ವೈಫಲ್ಯ ಈಗಾಗಲೇ ಸಾಬೀತಾಗಿದೆ. ಆಗೊಮ್ಮೆ ಈಗೊಮ್ಮೆ ಕೆಲವರು ಮಿಂಚಿದ್ದು ಬಿಟ್ಟರೆ ಉಳಿದಂತೆ ವೈಫಲ್ಯ ಕಾಣುತ್ತ ಬಂದಿದೆ. ಆಸ್ಟ್ರೇಲಿಯಾ 278 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರುವುದರಿಂದ ಮಿಥಾಲಿ ರಾಜ್ ನೇತೃತ್ವದ ಬೌಲಿಂಗ್ ವಿಭಾಗದ ಸಾಮರ್ಥ್ಯದ ಮೇಲೂ ಸಂದೇಹ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.