ADVERTISEMENT

IND vs SA 4th T20I: ಭಾರತಕ್ಕೆ ಸರಣಿ ಕೈವಶದತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:51 IST
Last Updated 16 ಡಿಸೆಂಬರ್ 2025, 23:51 IST
<div class="paragraphs"><p>ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಬ್ಯಾಟರ್ ಅಭಿಷೇಕ್ ಶರ್ಮಾ</p></div>

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಬ್ಯಾಟರ್ ಅಭಿಷೇಕ್ ಶರ್ಮಾ

   

(ಪಿಟಿಐ ಚಿತ್ರ)

ಲಖನೌ: ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಎದುರಿನ ಟಿ20 ಕ್ರಿಕೆಟ್ ಸರಣಿ ಜಯಿಸಲು ಈಗ ಉತ್ತಮ ಅವಕಾಶ ಒದಗಿಬಂದಿದೆ. ಆದರೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಮೇಲಿನ ಒತ್ತಡ ಮಾತ್ರ ಕಡಿಮೆಯಾಗಿಲ್ಲ. 

ADVERTISEMENT

ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುನ್ನಡೆಯಲ್ಲಿದೆ. ಬುಧವಾರ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ದಲ್ಲಿ ಗೆದ್ದರೆ ಸರಣಿ ಕೈವಶವಾಗಲಿದೆ. ಆದರೆ ಸರಣಿ ಗೆಲುವಿನ ಆಸೆ ಜೀವಂತವಾಗಿ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಕೂಡ ಈ ಪಂದ್ಯದಲ್ಲಿ ಜಯಿಸುವ ಒತ್ತಡದಲ್ಲಿದೆ. 

ಇನ್ನೊಂದೆಡೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ರನ್‌ ಗಳಿಸುವ ಒತ್ತಡ ಹೆಚ್ಚುತ್ತಿದೆ. ಅವರು ಸತತವಾಗಿ ವಿಫಲ ರಾಗಿದ್ದಾರೆ. ಈ ಋತುವಿನಲ್ಲಿ ಅವರು 15 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಕೂಡ ಲಯ ಕಂಡುಕೊಳ್ಳುತ್ತಿಲ್ಲ. ಇದು ತಂಡಕ್ಕೆ ದುಬಾರಿಯಾಗುತ್ತಿದೆ.
ಅಕ್ಷರ್ ಪಟೇಲ್ ಆನಾರೋಗ್ಯದ ಕಾರಣದಿಂದ ವಿಶ್ರಾಂತಿ ಪಡೆದಿದ್ದಾರೆ. ಅವರ ಸ್ಥಾನಕ್ಕೆ ಶಾಬಾಜ್ ಅಹಮದ್ ಅವಕಾಶ ಪಡೆದಿದ್ದಾರೆ. ಇದರಿಂದಾಗಿ ಕುಲದೀಪ್ ಯಾದವ್ ಅವರಿಗೆ ಮತ್ತಷ್ಟು ಅವಕಾಶಗಳು ಸಿಗಲಿವೆ. 

ಧರ್ಮಶಾಲಾದ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ವಿಶ್ರಾಂತಿ ಪಡೆದಿದ್ದರು. ಈ ಪಂದ್ಯಕ್ಕೆ ಅವರು ಮರಳುವ ಸಾಧ್ಯತೆ ಇದೆ. ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ಹರ್ಷಿತ್ ರಾಣಾ ಅವರು ತಮ್ಮ ಹೊಣೆಯನ್ನು ಅಮೋಘವಾಗಿ ನಿರ್ವಹಿಸಿದ್ದರು. ಪ್ರವಾಸಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಅದರಿಂದಾಗಿ ಭಾರತಕ್ಕೆ ಗೆಲುವಿನ ಹಾದಿ ಸುಲಭವಾಗಿತ್ತು. 

ದಕ್ಷಿಣ ಆಫ್ರಿಕಾ ತಂಡದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಏಡನ್ ಮರ್ಕರಂ ಅವರನ್ನು ನಿಯಂತ್ರಿಸುವುದು ಆತಿಥೇಯ ಬೌಲರ್‌ಗಳಿಗೆ ಸವಾಲಾಗಲಿದೆ. ಕ್ವಿಂಟನ್ ಡಿ ಕಾಕ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟನ್ ಸ್ಟಬ್ಸ್‌, ಡೇವಿಡ್ ಮಿಲ್ಲರ್ ಅವರು ದೊಡ್ಡ ಜೊತೆಯಾಟಗಳಲ್ಲಿ ಭಾಗಿಯಾಗದಂತೆ ತಡೆಯುವ ಸವಾಲು ಕೂಡ ಬೌಲರ್‌ಗಳಿಗೆ ಇದೆ. 

ಮಾರ್ಕೊ ಯಾನ್ಸೆನ್, ಲುಥೊ ಸಿಪಾಮ್ಲಾ, ಲುಂಗಿ ಎನ್‌ಗಿಡಿ ಅವರು ಪರಿಣಾಮಕಾರಿ ದಾಳಿ ನಡೆಸಬಲ್ಲ ಬೌಲರ್‌ ಗಳಾಗಿದ್ದಾರೆ. ಭಾರತದ ಬ್ಯಾಟರ್‌ಗಳಿಗೆ ಅವರು ಕಠಿಣ ಸವಾಲೊಡ್ಡಬಲ್ಲರು. 

ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.