ADVERTISEMENT

ಕೇರಳ ಕ್ರೀಡಾ ಸಚಿವರ ಹೇಳಿಕೆ, ಖಾಲಿ ಮೈದಾನ: ಭಾರತ–ಲಂಕಾ ಪಂದ್ಯದಲ್ಲಿ ಆಗಿದ್ದೇನು?

55,000 ಸಾಮರ್ಥ್ಯದ ಕ್ರೀಡಾಂಗಣದಲ್ಲಿ 10,000 ಮಂದಿಯೂ ಇರಲಿಲ್ಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 16:26 IST
Last Updated 16 ಜನವರಿ 2023, 16:26 IST
ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿ ಭಾರತ ತಂಡದ ಆಟಗಾರರು
ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿ ಭಾರತ ತಂಡದ ಆಟಗಾರರು   

ಬೆಂಗಳೂರು: ತಿರುವನಂತಪುರಂನ ಗ್ರೀನ್‌ ಫೀಲ್ಡ್ ಮೈದಾನದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ವಿವಾದಕ್ಕೆ ಕಾರಣವಾಗಿದೆ.

ಪಂದ್ಯದ ವೇಳೆ ಕ್ರೀಡಾಂಗಣ ಖಾಲಿ ಇದ್ದಿದ್ದು ಹಲವು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಕೇರಳ ಕ್ರೀಡಾ ಸಚಿವರ ಹೇಳಿಕೆಯಿಂದಾಗಿ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದಿಂದ ದೂರ ಉಳಿಯುವಂತಾಯ್ತು ಎಂದು ಕೇರಳದ ವಿಪಕ್ಷಗಳು ದೂರಿವೆ.

ಕ್ರೀಡಾ ಸಚಿವರು ಹೇಳಿದ್ದೇನು?

ADVERTISEMENT

‘ಹಸಿವೆಯಿಂದ ಮಲಗುವವರು ಆಟ ನೋಡಬೇಕಿಲ್ಲ‘ ಎಂದು ಕೇರಳ ಕ್ರೀಡಾ ಸಚಿವ ಅಬ್ದುರ್ರಹಿಮಾನ್ ಅವರು ಜನವರಿ 9 ರಂದು ಹೇಳಿಕೆ ನೀಡಿದ್ದರು.

ದುಬಾರಿ ಟಿಕೆಟ್‌ ದರ ಹಾಗೂ ಟಿಕೆಟ್ ದರ ಮೇಲೆ ಶೇ 12 ರಷ್ಟು ಮನೋರಂಜನಾ ತೆರಿಗೆ ವಿಧಿಸಿರುವ ಬಗ್ಗೆ ಟೀಕೆಗಳು ಕೇಳಿ ಬಂದಿದ್ದರಿಂದ ಅವರು ಈ ಹೇಳಿಕೆ ನೀಡಿದ್ದರು.

ಅವರು ಈ ರೀತಿ ಹೇಳಿದ್ದರಿಂದಲೇ, ಭಾನುವಾರ ರಜಾದಿನವಾಗಿದ್ದರೂ, ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರಲಿಲ್ಲ ಎಂದು ವಿಪಕ್ಷಗಳು ದೂರಿವೆ.

‘ಮಲಯಾಳಿಗಳ ಸ್ವಾಭಿಮಾನವನ್ನು ಪ್ರಶ್ನೆ ಮಾಡಬೇಡಿ‘ ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್‌ ಅವರು ಸಚಿವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಂದ್ಯಕ್ಕೆ ಜನ ಬರದೇ ಇರುವುದು ನಷ್ಟವೇ. ಇದು ಸಚಿವರಿಗೆ ಆದ ನಷ್ಟವಲ್ಲ. ಅವರಿಗೆ ಪ್ರಚಾರ ಲಭಿಸಿದೆ. ಇದು ಕ್ರೀಡೆ ಹಾಗೂ ಕ್ರಿಕೆಟ್‌ ಅನ್ನು ಪ್ರೀತಿಸುವವರಿಗೆ ಆದ ನಷ್ಟ‘ ಎಂದು ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

55,000 ಸಾಮರ್ಥ್ಯ ಕ್ರೀಡಾಂಗಣದಲ್ಲಿ 10,000ಕ್ಕಿಂತ ಕಡಿಮೆ ಮಂದಿ ಪ್ರೇಕ್ಷಕರು ಇದ್ದರು. ಇದನ್ನು ಉಲ್ಲೇಖಿಸಿ ‘ಏಕದಿನ ಕ್ರಿಕೆಟ್ ನಶಿಸುತ್ತಿದೆಯೇ?‘ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಆತಂಕ ವ್ಯಕ್ತಪಡಿಸಿದ್ದರು.

ನಾವು ಕ್ರಿಕೆಟ್‌ ಅನ್ನು ಪ್ರೀತಿಸುತ್ತೇವೆ. ಆದರೆ ನಾವು ಸಚಿವರ ಮಾತನ್ನು ಅನುಸರಿಸಿದ್ದೇವೆ ಎಂದು ಹಲವು ಮಂದಿ ಕೇರಳಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಪೊಂಗಲ್‌ ಹಾಗೂ ಸಿಬಿಎಸ್‌ಇ ಪರೀಕ್ಷೆ ಇದ್ದಿದ್ದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು‘ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.