ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ.
ಭಾರತದಲ್ಲಿ ಬಯೋಬಬಲ್ ವ್ಯವಸ್ಥೆಯಲ್ಲಿ ನಡೆಯಲಿರುವ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಆಟಗಾರರಿಗೆ ತಾಲೀಮು ಆರಂಭಿಸಿದೆ.
ಮಂಗಳವಾರ ಪ್ರಕಾಶ್ ಪಡುಕೋಣೆ–ರಾಹುಲ್ ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತಂಡದ ಯುವ ಆಟಗಾರರ ಫಿಟ್ನೆಸ್ ಫರೀಕ್ಷೆ ನಡೆಯಿತು. ಆಧುನಿಕ ತಂತ್ರಜ್ಞಾನದ ಸಲಕರಣೆಗಳು ಇರುವ ಇಲ್ಲಿಯ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಆಟಗಾರರ ಎಲುವು ಸಾಂದ್ರತೆ, ವೇಗ, ಮಾಂಸಖಂಡಗಳ ಬಲಿಷ್ಠತೆಯ ಪರೀಕ್ಷೆಗಳನ್ನು ನಡೆಸಲಾಯಿತು. ಈ ಕುರಿತು ಆರ್ಸಿಬಿಯ ವಿಡಿಯೊವೊಂದನ್ನು ಟ್ವೀಟ್ ಮಾಡಿದೆ.
’ಕೊರೊನಾ ಕಾರಣದಿಂದಾಗಿ ಬಯೋಬಬಲ್ ವ್ಯವಸ್ಥೆಯಲ್ಲಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ದೈಹಿಕವಾದ ಶ್ರಮದೊಂದಿಗೆ ಮಾನಸಿಕವಾಗಿ ಸದೃಢವಾಗಿರುವುದು ಕೂಡ ಮುಖ್ಯವಾಗುತ್ತದೆ. ಆದ್ದರಿಂದ ಆಟಗಾರರಿಗೆ ನೀಡುವ ಫಿಟ್ನೆಸ್ ತರಬೇತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ತಂತ್ರಜ್ಞಾನದ ಅನುಕೂಲ ಇದೆ. ತಂತ್ರಾಂಶಗಳಿಂದ ಸಿಗುವ ದತ್ತಾಂಶಗಳು ಉಪಯುಕ್ತ. ಆದನ್ನು ಆಟಗಾರರನ್ನು ಮನೋದೈಹಿಕವಾಗಿ ಸದೃಢಗೊಳಿಸಲು ಬಳಸಿಕೊಳ್ಳುವ ರೀತಿಯು ಮುಖ್ಯವಾಗುತ್ತದೆ. ಅದಕ್ಕಾಗಿ ನುರಿತ ಸಿಬ್ಬಂದಿ ಇದ್ದಾರೆ. ಇದೀಗ ಅನ್ಕ್ಯಾಪ್ಡ್ ಆಟಗಾರರನ್ನು ಶಿಬಿರದಲ್ಲಿ ತೊಡಗಿಸಿಕೊಳ್ಳಲಾಗಿದೆ‘ ಎಂದು ತಂಡದ ಟ್ರೇನರ್ ಶಂಕರ್ ಬಸು ವಿಡಿಯೊದಲ್ಲಿ ಹೇಳಿದ್ದಾರೆ.
ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಪ್ರಮುಖ ಆಟಗಾರರು ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಯುವ ಆಟಗಾರ ದೇವದತ್ತ ಪಡಿಕ್ಕಲ್ ಮತ್ತಿತರರು ವಿಜಯ್ ಹಜಾರೆ ಟ್ರೋಫಿ ಟೂ್ನಿಯಲ್ಲಿ ಆಡುತ್ತಿದ್ದಾರೆ. ವಿದೇಶಿ ಆಟಗಾರರು ಮುಂದಿನ ವಾರ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.