ಚೆನ್ನೈ: ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಐಪಿಎಲ್ ಆರಂಭದಿಂದಲೂ ಅಶ್ವಿನ್, ಸೂಪರ್ ಕಿಂಗ್ಸ್ ತಂಡದಲ್ಲಿದ್ದರು. ಆದರೆ ಹಿಂದಿನ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಚೆನ್ನೈ ತಂಡ ಅವರನ್ನು ಖರೀದಿಸಲು ನಿರಾಸಕ್ತಿ ತೋರಿತ್ತು. ಹೀಗಾಗಿ ಪಂಜಾಬ್ ಪಾಲಾಗಿದ್ದರು.
ಕಿಂಗ್ಸ್ ಇಲೆವನ್ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಚೆನ್ನೈ ಕೂಡಾ ಇಷ್ಟೇ ಪಂದ್ಯಗಳಲ್ಲಿ ಜಯಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದವರಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.
ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅಚ್ಚರಿಯ ರೀತಿಯಲ್ಲಿ ಗೆದ್ದಿದ್ದ ಕಿಂಗ್ಸ್ ಇಲೆವನ್, ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದೆ. ಡೆಲ್ಲಿ ವಿರುದ್ಧ ವಿಶ್ರಾಂತಿ ಪಡೆದಿದ್ದ ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಡೆಲ್ಲಿ ವಿರುದ್ಧ ‘ಹ್ಯಾಟ್ರಿಕ್’ ವಿಕೆಟ್ ಉರುಳಿಸಿ ಗಮನ ಸೆಳೆದಿದ್ದ ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಮೇಲೂ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ. ಸರ್ಫರಾಜ್ ಖಾನ್ ಹಾಗೂ ಡೇವಿಡ್ ಮಿಲ್ಲರ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.
ಹಾಲಿ ಚಾಂಪಿಯನ್ ಚೆನ್ನೈ, ಈ ಬಾರಿ ತವರಿನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಗೆದ್ದಿದ್ದು, ಈಗ ‘ಹ್ಯಾಟ್ರಿಕ್’ ಸಾಧನೆ ಮಾಡುವತ್ತ ಗಮನ ಹರಿಸಿದೆ.
ಈ ಕನಸು ಸಾಕಾರಗೊಳ್ಳಬೇಕಾದರೆ ‘ಮಹಿ’ ಪಡೆ ಬ್ಯಾಟಿಂಗ್ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬೇಕು. ಈ ತಂಡ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಮಣಿದಿತ್ತು. ಇನಿಂಗ್ಸ್ ಆರಂಭಿಸುವ ಅಂಬಟಿ ರಾಯುಡು ಮತ್ತು ಶೇನ್ ವಾಟ್ಸನ್ ಅವರ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ.
ತಂಡಗಳು:ಚೆನ್ನೈಸೂಪರ್ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್ಕೀಪರ್), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಮುರಳಿ ವಿಜಯ್, ಕೇದಾರ್ ಜಾಧವ್, ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ಣೊಯಿ, ಋತುರಾಜ್ ಗಾಯಕವಾಡ, ಡ್ವೆನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್, ಹರಭಜನ್ ಸಿಂಗ್, ಮಿಚೆಲ್ ಸ್ಯಾಂಟನರ್, ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ಕೆ. ಎಂ. ಆಸಿಫ್, ದೀಪಕ್ ಚಾಹರ್.
ಕಿಂಗ್ಸ್ ಇಲೆವನ್ ಪಂಜಾಬ್: ರವಿಚಂದ್ರನ್ ಅಶ್ವಿನ್ (ನಾಯಕ), ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಿಮಾನ್, ಡೇವಿಡ್ ಮಿಲ್ಲರ್, ಸ್ಯಾಮ್ ಕರನ್, ವರುಣ್ ಚಕ್ರವರ್ತಿ, ನಿಕೋಲಸ್ ಪೂರನ್, ಮೊಯಿಸಸ್ ಹೆನ್ರಿಕ್ಸ್, ಹಾರ್ಡಸ್ ವಿಲ್ಜಾನ್, ದರ್ಶನ್ ನಾಲ್ಕಂಡೆ, ಸರ್ಫರಾಜ್ ಖಾನ್, ಆರ್ಷದೀಪ್ ಸಿಂಗ್, ಅಗ್ನಿವೇಶ್ ಅಯಾಚಿ, ಹರಪ್ರೀತ್ ಬ್ರಾರ್, ಮುರುಗನ್ ಅಶ್ವಿನ್, ಆಂಡ್ರ್ಯೂ ಟೈ, ಅಂಕಿತ್ ರಜಪೂತ್, ಮನದೀಪ್ ಸಿಂಗ್, ಸಿಮ್ರಾನ್ ಸಿಂಗ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.