ಅಬುಧಾಬಿ: ಅಂತರರಾಷ್ಟ್ರೀಯ ಕ್ರಿಕೆಟ್ಗೆ ಆಗಸ್ಟ್ ತಿಂಗಳಲ್ಲೇ ವಿದಾಯ ಹೇಳಿರುವ ಎಂಎಸ್ ಧೋನಿ ಅವರು ಸದ್ಯ ನಡೆಯುತ್ತಿರುವ ಟೂರ್ನಿಯ ಬಳಿಕ ಐಪಿಎಲ್ನಿಂದಲೂ ನಿವೃತ್ತರಾಗಲಿದ್ದಾರೆ ಎಂದು ಅನೇಕರು ಊಹಿಸಿದ್ದರು. ಆದರೆ ಅದನ್ನು ಸ್ವತಃ ಎಂಎಸ್ ಧೋನಿಯವರೇ ಅಲ್ಲಗಳೆದಿದ್ದಾರೆ. ಇದೀಗ ಫಾಫ್ ಡು ಪ್ಲೆಸಿ ಅವರು ಧೋನಿ ಮುಂದಿನ ವರ್ಷವೂ ಏಕೆ ಆಡಬೇಕು ಎಂಬುದನ್ನು ವಿವರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿತ್ತು. ಟಾಸ್ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಧೋನಿ, ‘ಖಂಡಿತಾ ಇದು ನನ್ನ ಕೊನೆಯ ಪಂದ್ಯವಲ್ಲ’ ಎಂದು ಉತ್ತರಿಸಿದ್ದರು. ಲುಂಗಿ ಎನ್ಗಿಡಿ ಜೊತೆ ನಡೆಸಿದ ಮಾತುಕತೆ ವೇಳೆ ಧೋನಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ಲೆಸಿ, ‘ನೀವು ಸಿಎಸ್ಕೆ ಬಗ್ಗೆ ಯೋಚಿಸುವಾಗ, ಧೋನಿ ಬಗ್ಗೆಯೂ ಯೋಚಿಸುತ್ತೀರಿ. ಏಕೆಂದರೆ ಐಪಿಎಲ್ನಲ್ಲಿ ಧೋನಿ ಆಡುವ ಅಗತ್ಯವಿದೆ. ಅಭಿಮಾನಿಗಳು ಅವರನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿ ಅವರು ಏಕೆ ಆಡಬಾರದು? ಅವರು ಈಗಲೂ ಉತ್ಸುಕರಾಗಿದ್ದಾರೆ. ಪ್ರತಿದಿನವೂ ಪುಟಿದೇಳಬಲ್ಲರು. ದೊಡ್ಡ ಆಟಗಾರರು ಆಡಲು ಬಂದಾಗ ಸಾಕಷ್ಟು ನಿರೀಕ್ಷೆಗಳು ಮತ್ತು ಒತ್ತಡ ಇರುತ್ತದೆ’ ಎಂದಿದ್ದಾರೆ.
‘ಮುಂದಿನ ವರ್ಷ ಅವರು ಮತ್ತಷ್ಟು ಬಲಿಷ್ಠರಾಗಿ ವಾಪಸ್ ಆಗಲು ಉತ್ಸುಕರಾಗಿದ್ದಾರೆ ಎಂಬುದನ್ನು ನಿಮಗೆ ಆ ಉತ್ತರವೇ ಹೇಳುತ್ತದೆ. ಅವರು ವಿದಾಯ ಹೇಳುವ ಸಾಧ್ಯತೆ ಇದೆ ಎಂಬ ಬಗ್ಗೆಸಾಕಷ್ಟು ಗಾಳಿ ಸುದ್ದಿ ಹರಿದಾಡುತ್ತಿವೆ. ಆ ಉತ್ತರ ಇದಕ್ಕೆಲ್ಲ ಸ್ಪಷ್ಟನೆ ನೀಡಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್;ಮುಂದಿನ ವರ್ಷವೂ ಆಡ್ತಾರಂತೆ ಧೋನಿ
ಧೋನಿ ನಾಯಕತ್ವದ ಚೆನ್ನೈ ತಂಡ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಟೂರ್ನಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 6 ಜಯ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಉಳಿದಿದೆ.ಚೆನ್ನೈ ತಂಡ ಲೀಗ್ ಹಂತದಲ್ಲಿ ಆಡಿದ ಮೊದಲ 11 ಪಂದ್ಯಗಳಲ್ಲಿ 8ರಲ್ಲಿ ಸೋಲು ಕಂಡಿತ್ತು. ಆದರೆ, ಕೊನೆಯ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಗೆಲುವಿನ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.