ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕಿನ್ನು ಒಂದು ದಿನ ಬಾಕಿ ಉಳಿದಿರುವಂತೆಯೇ ಸಹ ಆಟಗಾರರನ್ನು ಹುರಿದುಂಬಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ, ಟೂರ್ನಿಯುದ್ದಕ್ಕೂ ಹೆಚ್ಚಿನ ಬದ್ಧತೆಯೊಂದಿಗೆ ಆಡುವಂತೆ ಸಲಹೆ ಮಾಡಿದ್ದಾರೆ.
ಏಪ್ರಿಲ್ 9 ಶುಕ್ರವಾರದಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಅತ್ತ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ತಂಡವುಸತತ ಮೂರನೇ ಬಾರಿಗೆ ಕಿರೀಟವನ್ನು ಎದುರು ನೋಡುತ್ತಿದೆ.
ವಿರಾಟ್ ಕೊಹ್ಲಿ ಸಂದೇಶವನ್ನು ಆರ್ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. 'ಈ ಅದ್ಭುತ ತಂಡದೊಂದಿಗೆ ಸೇರಿಕೊಂಡಿರುವ ಎಲ್ಲ ಹೊಸ ಆಟಗಾರರಿಗೆ ಸ್ವಾಗತವನ್ನು ಕೋರುತ್ತೇವೆ. ಈ ಹಿಂದೆ ಇಲ್ಲಿ ಆಡಿರುವ ಆಟಗಾರರಿಂದ ತಿಳಿದುಕೊಂಡಿರುವಂತೆಯೇ ಟೂರ್ನಿಯುದ್ಧಕ್ಕೂ ತಂಡದ ವಾತಾವರಣ ಹಾಗೂ ಮನೋಬಲ ಅದ್ಭುತವಾಗಿರಲಿದೆ. ಹಾಗಾಗಿ ನಿಮ್ಮಿಂದ ನಾನು ನಿರೀಕ್ಷೆ ಮಾಡುವ ಏಕೈಕ ವಿಷಯವೇನೆಂದರೆ ಅದು ಪ್ರಾಕ್ಟಿಸ್ ಅಥವಾ ಡ್ರಿಲ್ ಸಮಯವೇ ಆಗಿರಲಿ, ಮೈದಾನದಲ್ಲಿ ವಿನಿಯೋಗಿಸುವ ಸಮಯದಲ್ಲಿ ಆಟಗಾರರಿಂದ ಹೆಚ್ಚಿನ ಬದ್ಧತೆಯನ್ನು ನಿರೀಕ್ಷೆ ಮಾಡುತ್ತೇನೆ. ನಾವು ಆಡುವ ರೀತಿ ಇದಾಗಿದ್ದು, ಯಾವತ್ತೂ ಬದಲಾಗದು' ಎಂದು ಹೇಳಿದ್ದಾರೆ.
ಕಳೆದ ಸಾಲಿನಲ್ಲಿ ತಂಡವು ಪ್ಲೇ-ಆಫ್ ಹಂತವನ್ನು ತಲುಪಿರುವುದನ್ನು ವಿರಾಟ್ ಕೊಹ್ಲಿ ನೆನಪಿಸಿದರು. ಇದು ಗುರಿಯತ್ತ ಸರಿಯಾದ ಪ್ರಯಾಣವಾಗಿದ್ದು, ಈ ಬಾರಿಯು ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ನಾವು ಸರಿಯಾದ ದಿಕ್ಕಿನತ್ತ ಹೆಜ್ಜೆಯನ್ನಿಟ್ಟಿದ್ದೇವೆ. ಈ ಬಾರಿ ನಮ್ಮ ತಂಡವು ಮತ್ತಷ್ಟು ಬಲಿಷ್ಠವೆನಿಸಿದ್ದು, ಉತ್ತಮ ಫಲಿತಾಂಶ ದಾಖಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ತುಂಬಾನೇ ಆನಂದಿಸಿದ್ದೇವೆ. ಅಭ್ಯಾಸ ಅವಧಿಯಲ್ಲಿ ಹೆಚ್ಚು ಸಮಯ ಕಳೆಯುವುದನ್ನು ಗಮನ ಕೇಂದ್ರಿಕರಿಸಿದ್ದೇವೆ ಎಂದಿದ್ದಾರೆ.
ಏತನ್ಮಧ್ಯೆ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್, ಆರ್ಸಿಬಿ ತಂಡದೊಂದಿಗೆ ಮಗದೊಂದು ಐಪಿಎಲ್ ಆಡಲು ಅತ್ಯಂತ ಉತ್ಸುಕನಾಗಿರುವುದಾಗಿ ತಿಳಿಸಿದ್ದಾರೆ.
ಏಳು ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಬಳಿಕ ನೆಟ್ಸ್ನಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದ್ದೇನೆ. ಕಳೆದ ವಾರ ಕೊಠಡಿಯಲ್ಲೇ ಉಳಿದುಕೊಂಡಿದ್ದೆ. ಹಾಗಾಗಿ ಶೇಕಡಾ 100ರಷ್ಟು ಚೆಂಡನ್ನು ಮಿಡ್ಲ್ ಮಾಡಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಅಭ್ಯಾಸಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.