ADVERTISEMENT

ಪ್ಲೇ-ಆಫ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಬಯೋಬಬಲ್ ತೊರೆದ ಇಬ್ಬರು ಆಟಗಾರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2021, 10:13 IST
Last Updated 11 ಅಕ್ಟೋಬರ್ 2021, 10:13 IST
ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರ
ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರ   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಯೋಬಬಲ್‌ನಿಂದ ಶ್ರೀಲಂಕಾದ ಇಬ್ಬರು ಆಟಗಾರರನ್ನು ಬಿಡುಗಡೆಗೊಳಿಸಲಾಗಿದೆ.

ಮುಂಬರುವ ಟ್ವೆಂಟಿ-20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಭಾಗವಹಿಸಲಿರುವುದರಿಂದ ವನಿಂದು ಹಸರಂಗ ಹಾಗೂ ದುಶ್ಮಂತ ಚಮೀರ ಅವರಿಗೆ ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದರೊಂದಿಗೆ ಐಪಿಎಲ್‌ ಪ್ಲೇ-ಆಫ್ ಹಂತದಲ್ಲಿ ಆರ್‌ಸಿಬಿ ಸೇವೆಗೆ ಅಲಭ್ಯರಾಗಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಎರಡನೇ ಹಂತದ ಟೂರ್ನಿಗಾಗಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಾಗೂ ಡೇನಿಯಲ್ ಸ್ಯಾಮ್ಸ್ ಸ್ಥಾನಕ್ಕೆಹಸರಂಗ ಹಾಗೂ ಚಮೀರ ಅವರನ್ನು ಹೆಸರಿಸಲಾಗಿತ್ತು.

ಹಸರಂಗ ಎರಡು ಪಂದ್ಯಗಳಲ್ಲಿ ಆಡಿದರೂ ಪ್ರಭಾವಿ ಎನಿಸಿಕೊಳ್ಳಲಿಲ್ಲ. ಅತ್ತ ಚಮೀರಗೆ ಅವಕಾಶ ಸಿಗಲಿಲ್ಲ.

ಈ ಕುರಿತು ಟ್ವೀಟ್ ಮಾಡಿರುವ ಆರ್‌ಸಿಬಿ, ಹಸರಂಗ ಹಾಗೂ ಚಮೀರ ವೃತ್ತಿಪರತೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದೆ. ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಬಳಗವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಟ್ವೆಂಟಿ-20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ 'ಎ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.