ADVERTISEMENT

ಎಸ್‌ಆರ್‌ಎಚ್ ವಿರುದ್ಧ ಆಡಲು ಹೆಚ್ಚಿನ ಪ್ರೇರಣೆಯ ಅಗತ್ಯವಿಲ್ಲ: ವಾರ್ನರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮೇ 2022, 14:09 IST
Last Updated 6 ಮೇ 2022, 14:09 IST
ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್
ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲು ಹೆಚ್ಚಿನ ಪ್ರೇರಣೆಯ ಅಗತ್ಯವಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ತಮ್ಮ ಹಳೆಯ ತಂಡದ ವಿರುದ್ಧವೇ ಅಜೇಯ 92 ರನ್ ಗಳಿಸಿದ್ದ ವಾರ್ನರ್, ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ಪಂದ್ಯದ ಬಳಿಕ ಹೈದರಾಬಾದ್ ವಿರುದ್ಧ ಹೆಚ್ಚಿನ ಚೈತನ್ಯದಿಂದ ಆಡಿದ್ದಾರೆಯೇ ಎಂದು ಶೇನ್ ವಾಟ್ಸನ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ವಾರ್ನರ್, 'ನನಗೆ ಹೆಚ್ಚುವರಿ ಪ್ರೇರಣೆಯ ಅಗತ್ಯವಿಲ್ಲ' ಎಂದು ಉತ್ತರಿಸಿದ್ದಾರೆ.

ಈ ಮೂಲಕ ಎಲ್ಲ ತಂಡಗಳ ವಿರುದ್ಧ ಆಡುವ ಅದೇ ಬದ್ಧತೆಯಿಂದಹೈದರಾಬಾದ್ ವಿರುದ್ಧ ಆಡಿರುವುದಾಗಿಸ್ಪಷ್ಟಪಡಿಸಿದ್ದಾರೆ.

ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿತ್ತು. ಅಲ್ಲದೆ ಹೈದರಾಬಾದ್ ಏಳಿಗೆಯಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದರು.

ಆದರೆ ಬಳಿಕ ವಾರ್ನರ್ ಅವರನ್ನು ನಾಯಕತ್ವದಿಂದಕೆಳಗಿಳಿಸಿದ ಎಸ್‌ಆರ್‌ಎಚ್, ಆಡುವ ಹನ್ನೊಂದರ ಬಳಗದಲ್ಲೂ ಸ್ಥಾನ ನೀಡಿರಲಿಲ್ಲ. ಅವರು 'ವಾಟರ್ ಬಾಯ್' ಆಗಿ ಮೈದಾನಕ್ಕೆ ಬಂದು ಸಹ ಆಟಗಾರರಿಗೆ ನೀರು ತಂದು ಕೊಡುವ ದೃಶ್ಯ ವೈರಲ್ ಆಗಿತ್ತು.

ವರ್ಷಾರಂಭದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ವಾರ್ನರ್ ಅವರನ್ನು ಎಸ್‌ಆರ್‌ಎಚ್ ಕೈಬಿಟ್ಟಿತ್ತು. ಬಳಿಕ ಆಸ್ಟ್ರೇಲಿಯಾದ ಈ ಸ್ಟಾರ್ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ಖರೀದಿಸಿತ್ತು.

ಅಭಿಮಾನಿಗಳು ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಹೈದರಾಬಾದ್ ವಿರುದ್ಧ ವಾರ್ನರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಏತನ್ಮಧ್ಯೆ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಭುವನೇಶ್ವರ್ ಕುಮಾರ್ ಅವರೊಂದಿಗಿನ ವಾರ್ನರ್ ಒಡನಾಟವು ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.