ADVERTISEMENT

ಧೋನಿ ಜೊತೆಗಿನ ಫೋಟೊ ಹಂಚಿದ ಗಂಭೀರ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 10:40 IST
Last Updated 1 ಏಪ್ರಿಲ್ 2022, 10:40 IST
ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್
ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್   

ಮುಂಬೈ: ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಸಮಾಲೋಚನೆ ಮಾಡುವ ಚಿತ್ರವನ್ನು ಹಂಚಿಕೊಂಡಿರುವಗೌತಮ್ ಗಂಭೀರ್, 'ನಾಯಕನನ್ನು ಭೇಟಿಯಾಗಿರುವುದು ಖುಷಿ ತಂದಿದೆ' ಎಂಬ ಅಡಿಬರಹವನ್ನು ನೀಡಿದ್ದಾರೆ.

ಪ್ರಸ್ತುತ ಗಂಭೀರ್ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟಿಸಿದ್ದಾರೆ.

ಐಪಿಎಲ್‌ನಲ್ಲಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಧೋನಿ ಅವರನ್ನು ಗಂಭೀರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಗಂಭೀರ್ ಸಂಭ್ರಮ...
ಚೆನ್ನೈ ವಿರುದ್ಧ ಲಖನೌ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. 211 ರನ್ ಗೆಲುವಿನ ಗುರಿಯನ್ನು ಇನ್ನೂ ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಈ ಸಂದರ್ಭದಲ್ಲಿ ಡಗೌಟ್‌ನಲ್ಲಿದ್ದ ಲಖನೌ ತಂಡದ ಮಾರ್ಗದರ್ಶಕ ಗಂಭೀರ್ ಸಂಭ್ರಮಾಚರಣೆ ಮಾಡಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಂಭೀರ್ ಅವರಲ್ಲಿ ಹೋರಾಟ ಮನೋಭಾವ ಕಿಂಚಿತ್ತು ಕಡಿಮೆಯಾಗಿಲ್ಲ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಧೋನಿ ನಾಯಕತ್ವದಲ್ಲಿ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗೌತಮ್ ಗಂಭೀರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಳಿಕ ಧೋನಿ ಜೊತೆಗಿನ ಭಿನ್ನಾಭಿಪ್ರಾಯವನ್ನು ಗಂಭೀರ್ ಬಹಿರಂಗವಾಗಿ ತೋಡಿಕೊಂಡಿದ್ದರು.

ಆದರೆ ಇತ್ತೀಚೆಗಷ್ಟೇ ಧೋನಿ ಬಗ್ಗೆ ಅಪಾರ ಗೌರವವಿದೆ ಎಂದು ಗಂಭೀರ್ ಹೇಳಿಕೆ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.