ಅಂಬಾರಿ ಬಸ್
ಮೈಸೂರು: ಐಪಿಎಲ್–2025ರ ಚಾಂಪಿಯನ್ ಕಪ್ ಹಿಡಿದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಆಟಗಾರರ ಸವಾರಿ ಮೈಸೂರಿನ ‘ಅಂಬಾರಿ’ ಮೇಲೆ ನಡೆಯಲಿದೆ.
ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರ ಮೆರವಣಿಗೆಯು ಬುಧವಾರ ಸಂಜೆ ನಡೆಯಲಿದ್ದು, ಮೈಸೂರಿನ ದಸರಾ ಆಕರ್ಷಣೆಯಾದ ‘ಅಂಬಾರಿ’ ಬಸ್ ಬಳಕೆಯಾಗಲಿದೆ.
ಆರ್ಸಿಬಿ ತಂಡದ ವ್ಯವಸ್ಥಾಪಕರು ಪ್ರವಾಸೋದ್ಯಮ ಇಲಾಖೆಯ ‘ಅಂಬಾರಿ’ ಬಸ್ ಅನ್ನು ಕೇಳಿದ್ದು, ಮಂಗಳವಾರ ಬೆಂಗಳೂರು ತಲುಪಿದೆ. ಸಂಭ್ರಮ ಮುಗಿಲು ಮುಟ್ಟಿರುವಾಗಲೇ, ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಇಲಾಖೆಯು ಆರಂಭಿಸಿದ ತೆರೆದ ಬಸ್ನಲ್ಲಿ ನೆಚ್ಚಿನ ಆಟಗಾರರು ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಪುಳಕ ಉಂಟುಮಾಡಲಿದೆ.
ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಮೈಸೂರಿಗೆ 2021ರಲ್ಲಿ 3 ಡಬಲ್ ಡೆಕ್ಕರ್ ಬಸ್ ‘ಅಂಬಾರಿ'ಯನ್ನು ನೀಡಿತ್ತು. ಪ್ರವಾಸಿಗರು ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ದಸರೆ ವೇಳೆ ಈ ಬಸ್ಗೆ ಭಾರಿ ಬೇಡಿಕೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.