ಸಮೀರ್ ರಿಝ್ವಿ ಹಾಗೂ ಟ್ರಿಸ್ಟನ್ ಸ್ಟಬ್ಸ್ ಗೆಲುವಿನ ಸಂಭ್ರಮ
(ಪಿಟಿಐ ಚಿತ್ರ)
ಜೈಪುರ: ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಜಯ ದಾಖಲಿಸಿದೆ. ಆ ಮೂಲಕ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (53) ಹಾಗೂ ಮಾರ್ಕಸ್ ಸ್ಟೋಯಿನಿಸ್ (44*) ಅಮೋಘ ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಸಮೀರ್ ರಿಝ್ವಿ ಬಿರುಸಿನ ಅರ್ಧಶತಕದ (58*) ಬಲದಿಂದ ಇನ್ನೂ ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ 19.3 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
25 ಎಸೆತಗಳನ್ನು ಎದುರಿಸಿದ ರಿಝ್ವಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 58 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡೆಲ್ಲಿ ಪರ ಕರುಣ್ ನಾಯರ್ (44), ಕೆ.ಎಲ್. ರಾಹುಲ್ (35), ನಾಯಕ ಫಫ್ ಡುಪ್ಲೆಸಿ (23) ಹಾಗೂ ಟ್ರಿಸ್ಟನ್ ಸ್ಟಬ್ಸ್ ಉಪಯುಕ್ತ ಕಾಣಿಕೆ ನೀಡಿದರು.
200+ ರನ್ ಗುರಿ ಬೆನ್ನಟ್ಟಿದ ಡೆಲ್ಲಿ...
ಐಪಿಎಲ್ ಇತಿಹಾಸದಲ್ಲಿ ಮೂರನೇ ಸಲ ಡೆಲ್ಲಿ 200ಕ್ಕೂ ಹೆಚ್ಚು ರನ್ಗಳ ಗುರಿ ಬೆನ್ನಟ್ಟಿದ ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲೇ ವಿಶಾಖಪಟ್ಟದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 210 ರನ್ ಗುರಿ ಬೆನ್ನಟ್ಟಿತ್ತು. ಇನ್ನು 2017ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 209 ರನ್ ಚೇಸ್ ಮಾಡಿತ್ತು.
ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದ ಡೆಲ್ಲಿ...
ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿದ್ದ ಡೆಲ್ಲಿಗೆ ಪ್ಲೇ-ಆಫ್ ಕನಸು ಸ್ವಲ್ಪದರಲ್ಲೇ ಕೈತಪ್ಪಿದೆ. ಆಡಿರುವ 14 ಪಂದ್ಯಗಳಲ್ಲಿ ಏಳು ಗೆಲುವು, ಆರು ಸೋಲಿನೊಂದಿಗೆ 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಅಗ್ರಸ್ಥಾನಕ್ಕಾಗಿ ಪೈಪೋಟಿ...ಆರ್ಸಿಬಿಗೆ ಅವಕಾಶ?
ಮತ್ತೊಂದೆಡೆ ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನ ಕಾಯ್ದುಕೊಂಡಿದೆ. 13 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ 17 ಅಂಕಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಷ್ಟೇ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಪಂಜಾಬ್ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಪಂಜಾಬ್ +0.327 ಹಾಗೂ ಆರ್ಸಿಬಿ +0.255 ರನ್ ರೇಟ್ ಕಾಯ್ದುಕೊಂಡಿದೆ. ಹಾಗಾಗಿ ಅಗ್ರ ಎರಡು ಸ್ಥಾನಗಳಲ್ಲಿ ಗುರುತಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಕೊನೆಯ ಪಂದ್ಯಗಳು ನಿರ್ಣಾಯಕವೆನಿಸಿವೆ.
ಮೇ 27ರಂದು ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಎಕನಾ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇದಕ್ಕೂ ಒಂದು ದಿನ ಮೊದಲು ಪಂಜಾಬ್ನ ಕೊನೆಯ ಪಂದ್ಯ ನಡೆಯಲಿದೆ. ಮೇ 26ರಂದು ಜೈಪುರದಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಗುಜರಾತ್ ಅಗ್ರಸ್ಥಾನಕ್ಕೂ ಕಂಟಕ?
ಸದ್ಯ 13 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದೆ. ಇಂದು (ಭಾನುವಾರ) ಅಹದಾಬಾದ್ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.
ಅಲ್ಲದೆ ಅಗ್ರಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಅಗ್ರಸ್ಥಾನಕ್ಕೆ ಕಂಟಕ ಎದುರಾಗಲಿದೆ.
ಪ್ಲೇ-ಆಫ್ ಹಂತದಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್ಗೆ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿವೆ. ಮೇ 29ರಂದು ಚಂಡೀಗಡದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ಗೆ ಟಿಕೆಟ್ ಪಡೆಯಲಿದೆ. ಮತ್ತೊಂದೆಡೆ ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ನಲ್ಲಿ ಆಡುವ ಅವಕಾಶ ಸಿಗಲಿದೆ.
ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಜೂನ್ 30ರಂದು ನಡೆಯಲಿರುವ ಎಲಿಮೇಟರ್ನಲ್ಲಿ ಮುಖಾಮುಖಿಯಾಗಲಿದೆ. ಇಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ಗೆ ತೇರ್ಗಡೆ ಹೊಂದಲಿದೆ.
ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ 1ರಂದು ನಿಗದಿಯಾಗಿದೆ. ಫೈನಲ್ ಪಂದ್ಯವು ಜೂನ್ 3ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಚಂಡೀಗಢದಲ್ಲೂ ಹಾಗೂ ಕ್ವಾಲಿಫೈಯರ್ 2 ಪಂದ್ಯವು ಅಹಮದಾಬಾದ್ನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.