ವಿರಾಟ್ ಕೊಹ್ಲಿ, ಆರ್ಸಿಬಿ ತಂಡ (ಪಿಟಿಐ ಚಿತ್ರ) ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿದೆ.
ಆರ್ಸಿಬಿ, ಬರೋಬ್ಬರಿ 18 ವರ್ಷದಿಂದ ಪ್ರಶಸ್ತಿ ಬರ ಅನುಭವಿಸುತ್ತಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್ಗೇರಿತ್ತಾದರೂ, 'ಚಾಂಪಿಯನ್' ಎನಿಸಿಕೊಳ್ಳಲು ವಿಫಲವಾಗಿತ್ತು.
ಈವರೆಗಿನ ಆವೃತ್ತಿಗಳಿಗೆ ಹೋಲಿಸಿದರೆ ಈ ವರ್ಷ ಸಮತೋಲನದಿಂದ ಕೂಡಿರುವ ತಂಡ ಟ್ರೋಫಿಗೆ ಮುತ್ತಿಡುವ ಭರವಸೆ ಮೂಡಿಸಿದೆ. ಹಾಗಾಗಿಯೇ, 'ಈ ಸಲ ಕಪ್ ನಮ್ಮದೇ' ಎನ್ನುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.
ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆಲ್ಲುವ ತಂಡಕ್ಕೆ ಆರ್ಸಿಬಿಯಿಂದ 'ಅಂತಿಮ' ಸವಾಲು ಎದುರಾಗಲಿದೆ. ಫೈನಲ್ ಪಂದ್ಯ ಜೂನ್ 3ರಂದು ಅಹಮದಾಬಾದ್ನಲ್ಲೇ ನಡೆಯಲಿದೆ.
ಮುಖ್ಯಮಂತ್ರಿಗೊಂದು ಪತ್ರ
ಆರ್ಸಿಬಿ ಫೈನಲ್ಗೇರುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸತತ 18 ವರ್ಷಗಳಿಂದ ಪ್ರಶಸ್ತಿಗಾಗಿ ಕಾದು ಸಾಕಾಗಿರುವ ಈ ಅಭಿಮಾನಿ, ಮುಖ್ಯಮಂತ್ರಿ ಎದುರು ವಿಶೇಷ ಬೇಡಿಕೆ ಇಟ್ಟಿದ್ದಾರೆ. 'ಈ ಬಾರಿ ಆರ್ಸಿಬಿ ಗೆದ್ದರೆ, ಅಧಿಕೃತ ರಜೆ ನೀಡಬೇಕು. ಟ್ರೋಫಿ ಗೆದ್ದ ದಿನವನ್ನು 'ಕರ್ನಾಟಕ ರಾಜ್ಯ ಆರ್ಸಿಬಿ ಅಭಿಮಾನಿ ಹಬ್ಬ'ವೆಂದು ಘೋಷಿಸಬೇಕು' ಎಂದು ಕೋರಿದ್ದಾರೆ.
ಮುಂದುವರಿದು, 'ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವಂತೆಯೇ, ಎಲ್ಲ ಜಿಲ್ಲೆಗಳಲ್ಲಿ ಆರ್ಸಿಬಿ ಅಭಿಮಾನಿಗಳ ಹಬ್ಬ ಆಚರಿಸುವುದಕ್ಕೆ ಅನುವು ಮಾಡಿಕೊಡಬೇಕು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.