ಹರಾಜು ಪ್ರಕ್ರಿಯೆಯಲ್ಲಿ ಚಿತ್ರನಟರು, ರಾಜಕಾರಣಿಗಳ ಸಂಬಂಧಿಕರು ಸೇರಿದಂತೆ ಪ್ರಮುಖರು ಸಂಚಲನ ಮೂಡಿಸಿದರು. ತಾವು ಪ್ರತಿನಿಧಿಸುವ ಫ್ರಾಂಚೈಸ್ಗಳ ‘ತಂಡ’ದಲ್ಲಿ ಚರ್ಚಿಸಿ, ಅವಲೋಕನ ನಡೆಸಿ ಆಟಗಾರರನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸ್ ಪರವಾಗಿ ನಟ ಶಾರೂಖ್ ಖಾನ್ ಮತ್ತು ಅವರ ಪುತ್ರ ಆರ್ಯನ್ ಖಾನ್ ಇದ್ದರು. ಮುಂಬೈ ಇಂಡಿಯನ್ಸ್ನ ಮಾಲಕರಾದ ನೀತಾ ಅಂಬಾನಿ ಹಾಗೂ ಪುತ್ರ ಆಕಾಶ್ ಅಂಬಾನಿ, ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕ ಜಹೀರ್ ಖಾನ್ ಪಾಲ್ಗೊಂಡಿದ್ದರು.
ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಮಾಲಕಿ, ಮಾಧ್ಯಮ ಕ್ಷೇತ್ರದ ಉದ್ಯಮಿ ಕಲಾನಿಧೀ ಮಾರನ್ ಪುತ್ರಿ ಕಾವ್ಯ ಮಾರನ್ ಅವರು ಕೂಡ ಮಿಂಚಿದರು. ಆಟಗಾರರ ಖರೀದಿಯಲ್ಲಿ ಕಾವ್ಯ ತೋರಿದ ಪಕ್ವತೆಯನ್ನು ಮೆಚ್ಚಿ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್ಗೆ ₹ 30 ಲಕ್ಷ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಖರೀದಿಸಿತು. ಹರಾಜಿನ ಮೊದಲ ದಿನವಾದ ಶನಿವಾರ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ.
ಕಳೆದ ಬಾರಿ ₹ 20 ಲಕ್ಷಕ್ಕೆ ಅವರನ್ನು ಖರೀದಿಸಿದ್ದ ಮುಂಬೈ ಇಂಡಿಯನ್ಸ್ ಈ ಬಾರಿಯೂ ತಮ್ಮಲ್ಲೆ ಉಳಿಸಿಕೊಳ್ಳಲು ಮುಂದಾಯಿತು. ಆದರೆ ಭಾನುವಾರ ಗುಜರಾತ್ ಟೈಟನ್ಸ್ ಕೂಡ ಅರ್ಜುನ್ ಮೇಲೆ ಕಣ್ಣಿಟ್ಟಿತ್ತು. ಮುಂಬೈ ಇಂಡಿಯನ್ಸ್ ₹ 20 ಲಕ್ಷಕ್ಕೆ ಖರೀದಿಸಲು ಬಯಸಿತು. ಅಷ್ಟರಲ್ಲಿ ₹ 25 ಲಕ್ಷ ನೀಡಲು ಗುಜರಾತ್ ಫ್ರಾಂಚೈಸ್ ಮುಂದಾಯಿತು. ಕೊನೆಗೆ ಮುಂಬೈ ಪಾಲಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.