
ಬೆಂಗಳೂರು: ಕರ್ನಾಟಕ ಬುಲ್ಡೋಜರ್ಸ್ ತಂಡವು ಭಾನುವಾರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಟೂರ್ನಿ–2026ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಅದರೊಂದಿಗೆ, 12 ವರ್ಷಗಳ ಬಳಿಕ ಟೂರ್ನಿಯಲ್ಲಿ ಮತ್ತೆ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಕಿಚ್ಚ ಸುದೀಪ್ ನೇತೃತ್ವದ ಬುಲ್ಡೋಜರ್ಸ್ ತಂಡವು ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಬೆಂಗಾಲ್ ಟೈಗರ್ಸ್ ತಂಡವನ್ನು ಮಣಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಾಲ್ ತಂಡವು ಕುರಿ ಪ್ರತಾಪ್ (13ಕ್ಕೆ3) ಹಾಗೂ ಸುನೀಲ್ ಕುಮಾರ್ (33ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಎದುರು ರನ್ ಗಳಿಸುವಲ್ಲಿ ತಿಣುಕಾಡಿತು. ಒಂದೆಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಧೃತಿಗೆಡದೆ ಆಡಿದ ಆರಂಭಿಕ ಬ್ಯಾಟರ್ ಜಾಯ್ ಕುಮಾರ್ ಮುಖರ್ಜಿ ಅರ್ಧಶತಕದೊಂದಿಗೆ ಆಸರೆಯಾದರು. ಅದರಿಂದಾಗಿ, ಬೆಂಗಾಲ್ ತಂಡವು 20 ಓವರ್ಗಳಲ್ಲಿ 129 ರನ್ ಗಳಿಸಿತು.
ಸಾಧಾರಣ ಗುರಿ ಬೆನ್ನಟ್ಟಿದ ಸುದೀಪ್ ಪಡೆಯು ರಾಜೀವ್ ಹನು (69; 37ಎ, 4x14, 6x1) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 16.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಡ ಸೇರಿತು.
2013 ಮತ್ತು 2014ರ ಚಾಂಪಿಯನ್ ಬುಲ್ಡೋಜರ್ಸ್ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿತ್ತು.
ಸಂಕ್ಷಿಪ್ತ ಸ್ಕೋರು
ಬೆಂಗಾಲ್ ಟೈಗರ್ಸ್: 20 ಓವರ್ಗಳಲ್ಲಿ 129 (ಜಾಯ್ ಕುಮಾರ್ ಮುಖರ್ಜಿ 54; ಕುರಿ ಪ್ರತಾಪ್ 13ಕ್ಕೆ3, ಸುನೀಲ್ ಕುಮಾರ್ 33ಕ್ಕೆ2).
ಕರ್ನಾಟಕ ಬುಲ್ಡೋಜರ್ಸ್: 16.4 ಓವರ್ಗಳಲ್ಲಿ 4 ವಿಕೆಟ್ಗೆ 133 (ರಾಜೀವ್ ಹನು 69, ಮಂಜುನಾಥ್ ಗೌಡ ಔಟಾಗದೇ 20; ರತ್ನದೀಪ್ ಘೋಷ್ 17ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.