
ಚಂಡೀಗಢ ವಿರುದ್ಧ ಉತ್ತಮ ಬ್ಯಾಟಿಂಗ್ ನಡೆಸಿದ ಸ್ಮರಣ್
ಹುಬ್ಬಳ್ಳಿ: ರಣಜಿ ಟ್ರೋಫಿಯ ತನ್ನ 5ನೇ ಪಂದ್ಯದಲ್ಲಿ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತದ ಹೊರತಾಗಿಯೂ ಸ್ಮರಣ್ ರವಿಚಂದ್ರನ್ (ಅಜೇಯ 227 ರನ್, 362 ಎ, 4X16, 6X2), ಕರುಣ್ ನಾಯರ್ (95) ಹಾಗೂ ಶ್ರೇಯಸ್ ಗೋಪಾಲ್ (62) ರನ್ಗಳ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 547\8 ಡಿಕ್ಲೇರ್ ಮಾಡಿಕೊಂಡಿತು.
ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಚಂಡೀಗಢದ ಪರ ನಾಯಕ ವೊಹ್ರಾ (ಅಜೇಯ 106) ಏಕಾಂಗಿ ಹೋರಾಟ ನಡೆಸಿದರು. ಆದರೆ, ಉಳಿದ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರದ ಹಿನ್ನೆಲೆ ಮೊದಲ ಇನಿಂಗ್ಸ್ನಲ್ಲಿ 222 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಬೌಲಿಂಗ್ನಲ್ಲಿ ಮಿಂಚಿದ ಶ್ರೇಯಸ್ ಗೋಪಾಲ್ (23–2–73–7) ವಿಕೆಟ್ ಪಡೆದುಕೊಂಡರು.
325 ರನ್ಗಳ ಹಿನ್ನೆಡೆಯೊಂದಿಗೆ ಫಾಲೋ ಆನ್ ಪಡೆದ ಚಂಡೀಗಢ ಎರಡನೇ ಇನಿಂಗ್ಸ್ನಲ್ಲೂ ಕೇವಲ 140 ರನ್ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್ನಲ್ಲಿ ಚಂಡೀಗಢ ಪರ (43) ರನ್ ಗಳಿಸಿದ ಆರಂಭಿಕ ಬ್ಯಾಟರ್ ಶಿವಂ ಭಾಂಬ್ರಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಕರ್ನಾಟಕದ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಶಿಖರ್ ಶೆಟ್ಟಿ(12.5–2–61–5) ಹಾಗೂ ಶ್ರೇಯಸ್ ಗೋಪಾಲ್ (13–1–45–3) ವಿಕೆಟ್ ಪಡೆದು ಕರ್ನಾಟಕ ತಂಡ ಇನಿಂಗ್ಸ್ ಹಾಗೂ 185 ರನ್ಗಳ ಸುಲಭ ಗೆಲುವಿಗೆ ಕಾರಣರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.