
ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಖಜಾಂಚಿ ಸಂಜಯ್ ದಾಸ್ ಅವರು ಕರ್ನಾಟಕ 19 ವರ್ಷದೊಳಗಿನ ಮಹಿಳೆಯರ ತಂಡದ ನಾಯಕಿ ವಂದಿತಾ ಕೆ. ರಾವ್ ಅವರಿಗೆ ಟ್ರೋಫಿ ಪ್ರದಾನ ಮಾಡಿದರು
–ಸಿಎಬಿ ಚಿತ್ರ
ಬೆಂಗಳೂರು: ಜೆ. ದೀಕ್ಷಾ ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಆಂಧ್ರಪ್ರದೇಶ ತಂಡವನ್ನು ಫೈನಲ್ನಲ್ಲಿ 7 ವಿಕೆಟ್ಗಳಿಂದ ಮಣಿಸಿ, ಪ್ರಶಸ್ತಿ ಎತ್ತಿಹಿಡಿಯಿತು.
ಕೋಲ್ಕತ್ತದ ಸಾಲ್ಟ್ಲೇಕ್ನ ಜೆ.ಯು. ಕ್ಯಾಂಪಸ್ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ದೀಕ್ಷಾ (21ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್ ಎದುರು ಆಂಧ್ರಪ್ರದೇಶ ತಂಡವು ನಿಗದಿತ ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ವಂದಿತಾ ಕೆ. ರಾವ್ (18ಕ್ಕೆ2) ಹಾಗೂ ವೇದವರ್ಷಿಣಿ ವಿ. (21ಕ್ಕೆ2) ಅವರು ತಲಾ ಎರಡು ವಿಕೆಟ್ ಪಡೆದು ದೀಕ್ಷಾ ಅವರಿಗೆ ಉತ್ತಮ ಬೆಂಬಲ ನೀಡಿದರು.
ಸಾಧಾರಣ ಗುರಿ ಬೆನ್ನಟ್ಟಿದ ರಾಜ್ಯ ತಂಡವು 17.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 120 ರನ್ ಗಳಿಸಿ, ಗೆಲುವಿನ ನಗೆ ಬೀರಿತು.
5.5 ಓವರ್ಗಳಲ್ಲಿ 30 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡಕ್ಕೆ ಲಿಯಾಂಕಾ ಶೆಟ್ಟಿ (28, 28ಎ, 4x4) ಆಸರೆಯಾದರು. ಬಳಿಕ, ಸಿ.ಡಿ. ದೀಕ್ಷಾ (ಔಟಾಗದೇ 47, 39ಎ, 4x4, 6x1) ಹಾಗೂ ಕಾಶ್ವಿ ಕಂಡಿಕುಪ್ಪ (ಔಟಾಗದೇ 27, 20ಎ, 4x4) ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಜೆ. ದೀಕ್ಷಾ ಅವರು ಪಂದ್ಯದ ಆಟಗಾರ್ತಿ ಗೌರವಕ್ಕೆ ಪಾತ್ರರಾದರೆ, ತಂಡದ ರಚಿತಾ ಹತ್ವಾರ್ ಸರಣಿಯ ಆಟಗಾರ್ತಿ ಗೌರವ ಗಳಿಸಿದರು.
ಸಂಕ್ಷಿಪ್ತ ಸ್ಕೋರು
ಆಂಧ್ರಪ್ರದೇಶ: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 119 (ದೀಕ್ಷಾ ಕತ್ರಗದ್ದ 36, ಸೇತು ಸಾಯಿ 45, ದೀಕ್ಷಾ ಜೆ. 21ಕ್ಕೆ5, ವಂದಿತಾ ಕೆ. ರಾವ್ 18ಕ್ಕೆ2, ವೇದವರ್ಷಿಣಿ ವಿ. 21ಕ್ಕೆ2).
ಕರ್ನಾಟಕ: 17.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 120 (ದೀಕ್ಷಾ ಸಿ.ಡಿ. ಔಟಾಗದೇ 47, ಲಿಯಾಂಕಾ ಶೆಟ್ಟಿ 28, ಕಾಶ್ವಿ ಕೆ. ಔಟಾಗದೇ 27, ಬಿ.ಎಸ್.ದೀಪ್ತಿ 19ಕ್ಕೆ1, ಅಂಜುಂ 24ಕ್ಕೆ1, ಸಿ.ಎಚ್.ತಮನ್ನಾ 28ಕ್ಕೆ1).
ಫಲಿತಾಂಶ: ಕರ್ನಾಟಕ ತಂಡಕ್ಕೆ 7 ವಿಕೆಟ್ಗಳ ಜಯ, ಟ್ರೋಫಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.