ಜೊಹಾನ್ಸ್ಬರ್ಗ್: ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ನೆದರ್ಲೆಂಡ್ಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುವರು. ಐಸಿಸಿಯ ವಿಶ್ವಕಪ್ ಸೂಪರ್ ಸೀರಿಸ್ ಅಂಗವಾಗಿ ನಡೆಯಲಿರುವ ಮೂರು ಪಂದ್ಯಗಳ ಸರಣಿ ನವೆಂಬರ್ 26ರಂದು ಆರಂಭವಾಗಲಿದೆ.
16 ಮಂದಿಯ ತಂಡವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಬುಧವಾರ ಪ್ರಕಟಿಸಿದ್ದು ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದ ತೆಂಬಾ ಬವುಮಾ ಒಳಗೊಂಡಂತೆ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ.
ಬವುಮಾ ಜೊತೆಯಲ್ಲಿ ಬ್ಯಾಟರ್ ಏಡನ್ ಮರ್ಕರಮ್, ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ’ಕಾಕ್, ರಸಿ ವ್ಯಾನ್ ಡೆರ್ ಡುಸೆನ್, ವೇಗದ ಬೌಲರ್ಗಳಾದ ಕಗಿಸೊ ರಬಾಡ ಹಾಗೂ ಆ್ಯನ್ರಿಚ್ ನಾರ್ಕಿಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸತತವಾಗಿ ಬಯೊಬಬಲ್ನಲ್ಲಿ ಇದ್ದ ಕಾರಣ ಮತ್ತು ಅತಿಯಾದ ಕಾರ್ಯ ಒತ್ತಡದ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತಿಳಿಸಿದೆ. ತಂಡದಿಂದ ಹೊರಗಿಟ್ಟವರನ್ನು ಡಿಸೆಂಬರ್ ಮತ್ತು ಜನವರಿಯಲ್ಲಿ ಭಾರತದ ವಿರುದ್ಧ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಪರಿಗಣಿಸುವ ಸಾಧ್ಯತೆ ಇದೆ.
ಅಲ್ರೌಂಡರ್ ವೇಯ್ನ್ ಪಾರ್ನೆಲ್ ಅವರನ್ನು 2017ರ ನಂತರ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಅವರು ಇಂಗ್ಲೆಂಡ್ನಲ್ಲಿ ಕೌಂಟಿ ಪಂದ್ಯಗಳಲ್ಲಿ ಆಡಲು ತೆರಳಿದ್ದರು. ಬ್ಯಾಟರ್ ಜುಬೈರ್ ಹಂಸ ಮತ್ತು ರಯಾನ್ ರಿಕೆಲ್ಟನ್ ತಂಡಕ್ಕೆ ಆಯ್ಕೆಯಗಿರುವ ಹೊಸಬರು. ಹಂಸ ಈ ಹಿಂದೆ ಟೆಸ್ಟ್ ತಂಡದಲ್ಲಿದ್ದರು.
ತಂಡ: ಕೇಶವ್ ಮಹಾರಾಜ್ (ನಾಯಕ), ಡ್ಯಾರಿನ್ ದುಪವಿಲಾನ್, ಜುಬೈರ್ ಹಂಸ, ರೀಜಾ ಹೆನ್ರಿಕ್ಸ್, ಸಿಸಾಂಡ ಮಗಾಲ, ಜಾನೆಮನ್ ಮಲಾನ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ವೇಯ್ನ್ ಪಾರ್ನೆಲ್, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೋರಿಯಸ್, ರಯಾನ್ ರಿಕೆಲ್ಟನ್, ತಬ್ರೇಜ್ ಶಂಸಿ, ಕೈಲ್ ವೆರೆಯೆನ್ (ವಿಕೆಟ್ ಕೀಪರ್), ಲಿಜಾದ್ ವಿಲಿಯಮ್ಸ್, ಖಯಾ ಜೊಂಡೊ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.