ADVERTISEMENT

ಕೆಳ ಕ್ರಮಾಂಕದವರ ದಿಟ್ಟತನಕ್ಕೆ ಕೊಹ್ಲಿ ಮೆಚ್ಚುಗೆ

ಅಭ್ಯಾಸ ಪಂದ್ಯದ ಗೆಲುವು ಭರವಸೆ ಮೂಡಿಸಿದ ಎಂದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌

​ಪ್ರಜಾವಾಣಿ ವಾರ್ತೆ
Published 26 ಮೇ 2019, 14:15 IST
Last Updated 26 ಮೇ 2019, 14:15 IST
-ಎಎಫ್‌ಪಿ ಚಿತ್ರ
-ಎಎಫ್‌ಪಿ ಚಿತ್ರ   

ಲಂಡನ್‌ (ರಾಯಿಟರ್ಸ್‌/ಪಿಟಿಐ): ಪಂದ್ಯದಲ್ಲಿ ಸೋತಿರುವುದು ಬೇಸರದ ವಿಷಯ ನಿಜ. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತೋರಿದ ದಿಟ್ಟತನವನ್ನು ಮರೆಯುವುದು ಹೇಗೆ...?

ನ್ಯೂಜಿಲೆಂಡ್ ಎದುರು ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಸೋತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮಾತು ಇದು.

ಪಂದ್ಯದ 11ನೇ ಓವರ್‌ ವೇಳೆ ಭಾರತ 39 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಹಾರ್ದಿಕ್ ಪಾಂಡ್ಯ (30) ಮತ್ತು ರವೀಂದ್ರ ಜಡೇಜ (54) ಅವರ ದಿಟ್ಟ ಆಟದ ನೆರವಿನಿಂದ ಮೊತ್ತ 150ರ ಗಡಿ ದಾಟಿತ್ತು. 40ನೇ ಓವರ್‌ನಲ್ಲಿ 179 ರನ್‌ಗಳಿಗೆ ಆಲೌಟಾದ ತಂಡ ನಂತರ ಎದುರಾಳಿಗಳನ್ನು ಕಟ್ಟಿಹಾಕಲು ವಿಫಲವಾಗಿತ್ತು. ಕೇನ್ ವಿಲಿಯಮ್ಸನ್‌ (67) ಮತ್ತು ರಾಸ್ ಟೇಲರ್ (71) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಸುಲಭ ಜಯ ಸಾಧಿಸಿತ್ತು.

ADVERTISEMENT

‘ವಿಶ್ವಕಪ್‌ನಂಥ ಟೂರ್ನಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟಾದರೂ ಕೆಳ ಕ್ರಮಾಂಕದವರು ಇನಿಂಗ್ಸ್ ಕಟ್ಟುತ್ತಾರೆಂದರೆ ಅದು ಗಮನಾರ್ಹ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಈ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಒತ್ತಡವನ್ನು ಮೆಟ್ಟಿ ನಿಂತದ್ದು ಮತ್ತು ಜಡೇಜ ನಿರ್ಣಾಯಕ ಹಂತದಲ್ಲಿ ಉತ್ತಮ ಕಾಣಿಕೆ ನೀಡಿರುವುದು ಗಮನಾರ್ಹ’ ಎಂದು ಕೊಹ್ಲಿ ನುಡಿದರು.

ಭರವಸೆ ಹೆಚ್ಚಿದೆ: ಟ್ರೆಂಟ್ ಬೌಲ್ಟ್‌: ಭಾರತದ ಎದುರು ಗೆದ್ದ ಕಾರಣ ತಂಡದ ಭರವಸೆ ಹೆಚ್ಚಿದೆ ಎಂದು ನ್ಯೂಜಿಲೆಂಡ್ ತಂಡದ ಮಧ್ಯಮ ವೇಗಿ ಟ್ರೆಂಟ್ ಬೌಲ್ಟ್ ಅಭಿಪ್ರಾಯಪಟ್ಟರು.

ಪಂದ್ಯದಲ್ಲಿ ಬೌಲ್ಟ್‌ 33 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿ ಕೊಹ್ಲಿ ಬಳಗದ ಪತನಕ್ಕೆ ಪ್ರಮುಖ ಕಾರಣರಾಗಿದ್ದರು.

‘ಇಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತಿತ್ತು. ವಿಶ್ವಕಪ್‌ನ ಪಂದ್ಯಗಳಲ್ಲಿ ಪಿಚ್ ಇದೇ ರೀತಿ ವೇಗದ ಬೌಲಿಂಗ್‌ಗೆ ಅನುಕೂಲ ಆಗುವ ನಿರೀಕ್ಷೆ ಇದೆ. ಈ ನಿರೀಕ್ಷೆ ಹುಸಿಯಾದರೆ ಸಂಕಷ್ಟಕ್ಕೆ ಒಳಗಾಗಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.