ADVERTISEMENT

ದುಬಾರಿ ವಾಚುಗಳ ಲೆಕ್ಕ ಕೊಡದ ಕೃಣಾಲ್!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 21:41 IST
Last Updated 13 ನವೆಂಬರ್ 2020, 21:41 IST
ಕೃಣಾಲ್ ಪಾಂಡ್ಯ
ಕೃಣಾಲ್ ಪಾಂಡ್ಯ   

ಮುಂಬೈ: ದುಬೈನಿಂದ ಗುರುವಾರ ಮುಂಬೈಗೆ ಮರಳಿದ ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರು ತಮ್ಮ ಬಳಿ ಇದ್ದ ದುಬಾರಿ ಕೈಗಡಿಯಾರಗಳ ಮಾಹಿತಿಯನ್ನು ಘೋಷಿಸಿರಲಿಲ್ಲವೆಂದು ತಿಳಿದು ಬಂದಿದೆ.

ಇದರಿಂದಾಗಿ ಅವರು ಅಂತರರಾಷ್ಟೀಯ ನಿಯಮದನ್ವಯ ನಿಗದಿಪಡಿಸಲಾಗಿರುವ ಮೌಲ್ಯಕ್ಕಿಂತ ಹಚ್ಚಿನ ಬೆಲೆಬಾಳುವ ವಸ್ತುಗಳನ್ನು ದೇಶಕ್ಕೆ ತಂದಿದ್ದಾರೆನ್ನಲಾದ ಮಾಹಿತಿಯ ಹಿನ್ನೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

’ಕೃಣಾಲ್ ಪಾಂಡ್ಯ ಅವರ ಬಳಿ ಚಿನ್ನದ ವಸ್ತುಗಳು ಹೆಚ್ಚಿನ ಮೌಲ್ಯದ್ದಾಗಿರಲಿಲ್ಲ. ಆದರೆ ಕೈಗಡಿಯಾರಗಳು ಹೆಚ್ಚು ಮೌಲ್ಯದ್ದಾಗಿದ್ದವು. ಆದ್ದರಿಂದ ಡಿಆರ್‌ಐ ಈ ಪ್ರಕರಣವನ್ನು ವಿಮಾನ ನಿಲ್ದಾಣದ ಸುಂಕ ಮತ್ತು ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ‘ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೃಣಾಲ್ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿದ್ದರು. ನವೆಂಬರ್ 10ರಂದು ಮುಂಬೈ ತಂಡವು ಪ್ರಶಸ್ತಿ ಜಯಿಸಿತ್ತು. ಕೃಣಾಲ್ ಗುರುವಾರ ಸಂಜೆ ಮುಂಬೈಗೆ ಬಂದಾಗ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ಸುಮಾರು ಐದು ತಾಸು ವಿಚಾರಣೆ ನಡೆಸಿದರೆನ್ನಲಾಗಿದೆ.

’ಅವರ ಬಳಿ ಇದ್ದ ನಾಲ್ಕು ದುಬಾರಿ ಮೌಲ್ಯದ ವಾಚುಗಳ ಬೆಲೆಯು ಸುಮಾರು ₹ 75 ಲಕ್ಷ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಎರಡು ಕೃಣಾಲ್ ಅವರದ್ದು, ಇನ್ನೆರಡು ಅವರ ಸಹೋದರ ಹಾರ್ದಿಕ್ ಅವರದ್ದಾಗಿವೆ. ಆದರೆ ಇದು ಕಸ್ಟಮ್ಸ್‌ ನಿಯಮದಡಿಯಲ್ಲಿ ನಿಗದಿ ಪಡಿಸಿರುವ ಮೌಲ್ಯಕ್ಕಿಂತ ಹೆಚ್ಚಿನದಾಗಿದ್ದರಿಂದ ದಂಡ ವಿಧಿಸುವ ಬಗ್ಗೆ ಇಲಾಖೆಯು ತೀರ್ಮಾನ ಕೈಗೊಳ್ಳುವುದು‘ ಎಂದು ಇಂಗ್ಲಿಷ್ ಕ್ರಿಕೆಟ್ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

ರಾತ್ರಿ 10.30ರ ನಂತರ ಕೃಣಾಲ್ ಮನೆಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಕೃಣಾಲ್ ಸಹೋದರ ಹಾರ್ದಿಕ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿಯಲ್ಲಿ ಆಡುವ ಭಾರತ ತಂಡದೊಂದಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.