ADVERTISEMENT

ಮಹಾರಾಜ ಟ್ರೋಫಿ: ಡ್ರ್ಯಾಗನ್ಸ್ ಎದುರು ಮಂಡಿಯೂರಿದ ಬ್ಲಾಸ್ಟರ್ಸ್‌

ಮಹಾರಾಜ ಟ್ರೋಫಿ: ಮಂಗಳೂರು ಪರ ಶರತ್‌ ಅಜೇಯ ಅರ್ಧಶತಕ

ಆರ್.ಜಿತೇಂದ್ರ
Published 24 ಆಗಸ್ಟ್ 2025, 21:56 IST
Last Updated 24 ಆಗಸ್ಟ್ 2025, 21:56 IST
ಮಂಗಳೂರು ಡ್ರ್ಯಾಗನ್ಸ್ ಪರ 99 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಬಿ.ಆರ್. ಶರತ್‌–ಲೋಚನ್‌ ಗೌಡ – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.
ಮಂಗಳೂರು ಡ್ರ್ಯಾಗನ್ಸ್ ಪರ 99 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಬಿ.ಆರ್. ಶರತ್‌–ಲೋಚನ್‌ ಗೌಡ – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.   

ಮೈಸೂರು: ಬೆಂಗಳೂರು ಬ್ಲಾಸ್ಟರ್ಸ್‌ ಬೌಲರ್‌ಗಳನ್ನು ಬೆಂಡೆತ್ತಿದ ಮಂಗಳೂರು ಡ್ರ್ಯಾಗನ್ಸ್ ಆರಂಭಿಕ ಬ್ಯಾಟರ್‌ಗಳು 9 ವಿಕೆಟ್‌ಗಳ ಗೆಲುವು ತಂದಿತ್ತರು. ಈ ಮೂಲಕ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿಯಿತು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ‘ಮಹಾರಾಜ ಕಪ್‌’ ಟ್ವೆಂಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡದ ಬಿ.ಆರ್. ಶರತ್‌ ಹಾಗೂ ಲೋಚನ್‌ ಗೌಡರ 99 ರನ್ (56 ಎಸೆತ) ಜೊತೆಯಾಟದ ಎದುರು ಬ್ಲಾಸ್ಟರ್ಸ್ ಬೌಲರ್‌ಗಳು ಬಸವಳಿದರು. ಇನ್ನೂ 3.5 ಓವರ್ ಬಾಕಿ ಇರುವಂತೆಯೇ ಪಂದ್ಯ ಮುಗಿಯಿತು.

146 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಮಂಗಳೂರು ಪರ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ಬಿ.ಆರ್. ಶರತ್‌ (72 ರನ್‌, 47 ಎ, 4X9, 6X1) ಬೌಂಡರಿಗಳ ಮೂಲಕವೇ ಗೆಲುವಿನ ಕೋಟೆ ಕಟ್ಟಿ ಅಜೇಯರಾಗಿ ಉಳಿದರು. ಅವರಿಗೆ ಲೋಚನ್ ಗೌಡ (55 ರನ್, 32 ಎ, 4X6, 6X2) ಅರ್ಧಶತಕದ ಮೂಲಕ ಸಾಥ್‌ ನೀಡಿದರು. ಈ ಇಬ್ಬರೇ ಪಂದ್ಯ ಮುಗಿಸುವ ಉತ್ಸಾಹದಲ್ಲಿದ್ದಾಗ ವೇಗಿ ರೋಹನ್ ರಾಜು ಜೊತೆಯಾಟ ಮುರಿದರು.

ADVERTISEMENT

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಶುಭಾಂಗ್‌ ಹೆಗಡೆ ನಿರ್ಧಾರ ಫಲ ನೀಡಲಿಲ್ಲ. 2ನೇ ಎಸೆತದಲ್ಲೇ ಎಲ್‌.ಆರ್. ಚೇತನ್ (2) ಅಭಿಲಾಷ್‌ಗೆ ವಿಕೆಟ್ ಒಪ್ಪಿಸಿದರು. ರೋಹನ್‌ ಪಾಟೀಲ ಸೊನ್ನೆ ಸುತ್ತಿದರೆ, ಮಯಂಕ್ ಕೂಡ ಒಂದಂಕಿ (5) ಸ್ಕೋರ್ ದಾಟಲಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಶುಭಾಂಗ್ (39) ಹಾಗೂ ಭುವನ್ ರಾಜು (25) 4ನೇ ವಿಕೆಟ್‌ಗೆ 45 ರನ್‌ ಜೊತೆಯಾಟದ ಮೂಲಕ ಆಸರೆಯಾದರು. ನಂತರ ಬಂದ ಸೂರಜ್‌ ಅಹುಜಾ ಕೂಡ ಉಪಯುಕ್ತ ಕಾಣಿಕೆ (35) ನೀಡಿ ರನೌಟ್ ಆದರು. ಕಡೆಯಲ್ಲಿ ವಿದ್ಯಾಧರ ಪಾಟೀಲ (25) ಮೂರು ಸಿಕ್ಸರ್ ಸಿಡಿಸಿ ಅಬ್ಬರಿಸಿದರು.

ಮಂಗಳೂರು ಪರ ಸ್ಪಿನ್‌ ಕೈಚಳಕ ತೋರಿದ ನಾಯಕ ಶ್ರೇಯಸ್ ಗೋಪಾಲ್ 29ಕ್ಕೆ 3 ವಿಕೆಟ್ ಪಡೆದು ಸಂಭ್ರಮಿಸಿದರು. ಅಭಿಲಾಷ್‌ 2 ವಿಕೆಟ್‌ ಮೂಲಕ ಸಾಥ್‌ ನೀಡಿದರು.

ಈ ಗೆಲುವಿನೊಂದಿಗೆ ಮಂಗಳೂರು ಒಟ್ಟು 13 ಅಂಕದೊಂದಿಗೆ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಸೋಮವಾರ ಗುಲ್ಬರ್ಗ ಮಿಸ್ಟಿಕ್ಸ್ ಎದುರು ಲೀಗ್‌ ಹಂತದ ಕೊನೆಯ ಪಂದ್ಯ ಆಡಲಿದೆ. ಬೆಂಗಳೂರು ತನ್ನ 10 ಪಂದ್ಯಗಳನ್ನೂ ಮುಗಿಸಿದ್ದು, ತಲಾ ಐದು ಗೆಲುವು–ಸೋಲಿನೊಂದಿಗೆ 10 ಅಂಕ ಗಳಿಸಿ 4ನೇ ಸ್ಥಾನಕ್ಕೆ ಇಳಿದಿದೆ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 146 ( ಶುಭಾಂಗ್ ಹೆಗಡೆ 39, ಸೂರಜ್‌ ಅಹುಜಾ 26, ವಿದ್ಯಾಧರ ಪಾಟೀಲ 25, ಭುವನ್‌ ರಾಜ್ 25. ಶ್ರೇಯಸ್ ಗೋಪಾಲ್ 29ಕ್ಕೆ 3, ಅಭಿಲಾಷ್‌ ಶೆಟ್ಟಿ 27ಕ್ಕೆ 2)

ಮಂಗಳೂರು ಡ್ರ್ಯಾಗನ್ಸ್‌: 16.1 ಓವರ್‌ಗಳಲ್ಲಿ 1 ವಿಕೆಟ್‌ಗೆ 149 ( ಬಿ.ಆರ್. ಶರತ್‌ ಔಟಾಗದೇ 72 , ಲೋಚನ್ ಗೌಡ 55, ರೋಹನ್ ರಾಜು 33ಕ್ಕೆ 1)

ಇಂದಿನ ಪಂದ್ಯಗಳು: ಶಿವಮೊಗ್ಗ ಲಯನ್ಸ್‌ v/s ಹುಬ್ಬಳ್ಳಿ ಟೈಗರ್ಸ್‌– ಮಧ್ಯಾಹ್ನ 3.15
ಮಂಗಳೂರು ಡ್ರ್ಯಾಗನ್ಸ್ v/s ಗುಲ್ಬರ್ಗ ಮಿಸ್ಟಿಕ್ಸ್‌– ರಾತ್ರಿ 7.15

ಮಂಗಳೂರು ಡ್ರ್ಯಾಗನ್ಸ್ ಪರ 3 ವಿಕೆಟ್ ಪಡೆದ ನಾಯಕ ಶ್ರೇಯಸ್ ಗೋಪಾಲ್ ಬೌಲಿಂಗ್ ವೈಖರಿ –ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.