ADVERTISEMENT

ಪಾಕಿಸ್ತಾನದಲ್ಲಿ ಎಲ್ಲವೂ ತದ್ವಿರುದ್ಧ: ಪಿಸಿಬಿ ವಿರುದ್ಧ ಅಖ್ತರ್ ಆಕ್ರೋಶ

ಗಂಗೂಲಿ, ದ್ರಾವಿಡ್‌ರನ್ನು ಉದಾಹರಣೆಯಾಗಿ ನೀಡಿ ಪಾಕ್ ಕ್ರಿಕೆಟ್ ಮಂಡಳಿಗೆ ಚಾಟಿ ಬೀಸಿದ ವೇಗಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 5:05 IST
Last Updated 18 ಮಾರ್ಚ್ 2020, 5:05 IST
   

ಲಾಹೋರ್:ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಸರಿಯಾದ ನಿರ್ಧಾರಗಳನ್ನು ಕೈಗೊಳ್ಳದ ಹೊರತು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಆ ದೇಶದ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಬೇರೆಬೇರೆ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳ ಬಗ್ಗೆ ಮಾತನಾಡಿರುವ ಅವರು, ಪಿಸಿಬಿಯಲ್ಲಿ ತಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಸೌರವ್‌ ಗಂಗೂಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿದ್ದಾರೆ. ರಾಹುಲ್‌ ದ್ರಾವಿಡ್‌ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದಾರೆ. ಗ್ರೇಮ್‌ ಸ್ಮಿತ್‌ ದಕ್ಷಿಣ ಆಫ್ರಿಕಾಕ್ರಿಕೆಟ್‌ ಮಂಡಳಿಯ (ಸಿಎಸ್‌ಎ)ಅಧ್ಯಕ್ಷರಾಗಿದ್ದಾರೆ. ಮಾರ್ಕ್‌ ಬೌಚರ್‌ ಅಲ್ಲಿನ ತಂಡದ ಮುಖ್ಯ ಕೋಚ್‌ ಆಗಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ಎಲ್ಲವೂ ತದ್ವಿರುದ್ಧ. ಅವರು ನನ್ನನ್ನು ಬಳಸಿಕೊಳ್ಳಲಿಲ್ಲ.ಟಿವಿ ಶೋಗಳಲ್ಲಿ ಮಾತನಾಡುವುದು ನನ್ನ ಕೆಲಸ ಅಲ್ಲ. ಕ್ರಿಕೆಟ್‌ ಅನ್ನು ಬೆಳೆಸಲು ಅವರ ನನಗೂಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಮೇಲ್ವರ್ಗದಲ್ಲಿರುವವರು (ಆಡಳಿತದಲ್ಲಿರುವವರು) ತಮ್ಮ ಅಧೀನದಲ್ಲಿ ಯಾವಾಗಲೂ ದುರ್ಬಲರು ಅಥವಾ ಸಾಧಾರಣ ವ್ಯಕ್ತಿಗಳು ಇರುವುದನ್ನು ಬಯಸುತ್ತಾರೆ. ಇದರಿಂದ ತಮ್ಮಿಷ್ಟದಂತೆ ನಿಯಮಗಳನ್ನು ರೂಪಿಸಲು ಸಾಧ್ಯವಿರುತ್ತದೆ. ಅವರಿಗೆ ಅಂತಹ ಅಧ್ಯಕ್ಷರು, ಏನು ಹೇಳಿದರೂ ಕೇಳುವ ನಾಯಕರೇ ಬೇಕು. ಅಂತಹ ನಾಯಕರು ನಮಗೆ ಬೇಕಾ? ಏನು ಹೇಳಿದರೂ ಕೇಳುವ ಕೇಳುವ ನಾಯಕ ಮೈದಾನಕ್ಕೆ ಇಳಿಯಬೇಕೆ? ಅಥವಾ ಪ್ರಾರ್ಥನೆ ಮಾಡಬೇಕೆ?ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಪಾಕಿಸ್ತಾನವು ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನೂ ಸ್ಥಗಿತಗೊಳಸಿದೆ ಎಂದುಗಂಭೀರ ಆರೋಪ ಮಾಡಿರುವ ಅವರು,ಇದರಿಂದ ಆಟದ ಮೇಲೆ ಪರಿಣಾಮ ಉಂಟಾಗುತ್ತದೆ. ಯುವಕರು ಕ್ರಿಕೆಟ್‌ ಅನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.