ADVERTISEMENT

'ಅಕ್ಟೋಬರ್ 23' ನನ್ನ ಹೃದಯದಲ್ಲಿ ಉಳಿಯುವ ವಿಶೇಷ ದಿನ: ವಿರಾಟ್ ಹೀಗೆ ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 10:11 IST
Last Updated 26 ನವೆಂಬರ್ 2022, 10:11 IST
ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಚಿತ್ರ (ಚಿತ್ರಕೃಪೆ: Twitter / @imVkohli)
ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಚಿತ್ರ (ಚಿತ್ರಕೃಪೆ: Twitter / @imVkohli)   

'ಅಕ್ಟೋಬರ್ 23, 2022 ನನ್ನ ಹೃದಯದಲ್ಲಿ ಸದಾ ವಿಶೇಷವಾಗಿ ಉಳಿಯುತ್ತದೆ. ಆ ದಿನ ಇದ್ದಷ್ಟು ಚೈತನ್ಯವನ್ನುಕ್ರಿಕೆಟ್‌ನಲ್ಲಿ ಈ ಹಿಂದೆ ಎಂದೂ ಅನುಭವಿಸಿರಲಿಲ್ಲ. ಅದು ಎಂತಹ ಸಂಜೆಯಾಗಿತ್ತು'

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ತಮ್ಮ ಟ್ವಿಟರ್‌, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪುಟಗಳಲ್ಲಿ ಹೀಗೊಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

2022ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳುಅಕ್ಟೋಬರ್ 23ರಂದು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ, ಪಾಕಿಸ್ತಾನ ಕೈಯಿಂದ ಜಯ ಕಸಿದುಕೊಂಡಿದ್ದರು. ಆ ಇನಿಂಗ್ಸ್‌ ಅನ್ನು ಉಲ್ಲೇಖಿಸಿ ಕೊಹ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ADVERTISEMENT

ಭಾರತಕ್ಕೆ ಜಯ ತಂದ ಕೊಹ್ಲಿ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ8 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆಹಾಕಿತ್ತು.

ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ.ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ(4) ಹಾಗೂ ಉಪನಾಯಕ ಕೆ.ಎಲ್‌.ರಾಹುಲ್‌ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದರು.ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ (15) ಮತ್ತು ಅಕ್ಷರ್ ಪಟೇಲ್‌ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 31 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್‌ ಗತಿ ಹೆಚ್ಚಿಸಿದ್ದರು. ಕೊನೆಯವರೆಗೂ ಹೋರಾಡಿ ಗೆಲುವು ತಂದುಕೊಟ್ಟರು.

ಕೇವಲ53 ಎಸೆತಗಳನ್ನು ಎದುರಿಸಿದ ಕೊಹ್ಲಿ, 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್‌ ಬಾರಿಸಿ ಮಿಂಚಿದ್ದರು. ಅಂದಹಾಗೆ, ಮೊದಲ 50 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರ 32 ರನ್‌ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದ್ದರು. ಅದರಲ್ಲೂ ಹ್ಯಾರಿಸ್‌ ರವೂಫ್‌ ಎಸೆದ 19ನೇ ಓವರ್‌ನ ಕೊನೇ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ರೀತಿ ಕ್ರಿಕೆಟ್‌ ಪ್ರಿಯರು ಹುಬ್ಬೇರುವಂತೆ ಮಾಡಿತ್ತು.

ಆ ಎರಡು ಹೊಡೆತಗಳನ್ನು ಉಲ್ಲೇಖಿಸಿ 'ಹಾಗೆ ಸಿಕ್ಸರ್‌ ಸಿಡಿಸಲು ಕೊಹ್ಲಿಗಷ್ಟೇ ಸಾಧ್ಯ' ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಅಂತಿಮವಾಗಿಕೊಹ್ಲಿ ಆಟದಬಲದಿಂದ ಭಾರತ 4 ವಿಕೆಟ್‌ ಅಂತರದ ಜಯ ಸಾಧಿಸಿತ್ತು.

ಕೊಹ್ಲಿ ಇನಿಂಗ್ಸ್‌ಗೆ ದಿಗ್ಗಜರ ಮೆಚ್ಚುಗೆ
ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಗ್ರೇಗ್‌ ಚಾಪೆಲ್ ಅವರು ಕೊಹ್ಲಿ ಆಟವನ್ನು 'ದೇವರ ಗಾಯನ'ಕ್ಕೆ ಹೋಲಿಸಿದ್ದರು. 'ಭಗವದ್ಗೀತೆಯು ಹಿಂದೂ ಧರ್ಮದ ಸಾರವನ್ನು ಒಳಗೊಂಡ ಪವಿತ್ರ ಗ್ರಂಥವಾಗಿದೆ. ಅದನ್ನು ದೇವರೇ ಹಾಡಿದ್ದು ಎಂದು ಹೇಳಲಾಗುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಆಡಿದ ಇನಿಂಗ್ಸ್‌ ಸಹ ದೇವರ ಹಾಡಿಗೆ ಸಮೀಪದ್ದಾಗಿತ್ತು' ಎಂದು 'ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌'ಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದರು.

ಕೊಹ್ಲಿಯ ಆಕ್ರಮಣಕಾರಿ ಶೈಲಿಯು ಬ್ಯಾಟಿಂಗ್‌ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಚುಟುಕು ಕ್ರಿಕೆಟ್‌ ಅನ್ನು ಕಲಾತ್ಮಕಗೊಳಿಸಿದೆ ಎಂದೂ ಹೊಗಳಿದ್ದರು.

ಭಾರತದ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್‌ ಎಂದು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಸೇರಿದಂತೆಹಲವು ಖ್ಯಾತನಾಮರು ಶ್ಲಾಘಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.