ADVERTISEMENT

IPL 2025: ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಕನಸಿಗೆ ಜೋಶ್ ಬಲ

​ಪ್ರಜಾವಾಣಿ ವಾರ್ತೆ
Published 30 ಮೇ 2025, 23:30 IST
Last Updated 30 ಮೇ 2025, 23:30 IST
 ಆರ್‌ಸಿಬಿ ತಂಡದ ವೇಗಿ ಜೋಶ್ ಹ್ಯಾಜಲ್‌ವುಡ್ 
 ಆರ್‌ಸಿಬಿ ತಂಡದ ವೇಗಿ ಜೋಶ್ ಹ್ಯಾಜಲ್‌ವುಡ್    

ಮುಲ್ಲನಪುರ, ಚಂಡೀಗಢ: ಬಹಳಷ್ಟು ಕ್ಷೇತ್ರಗಳಲ್ಲಿ ‘ಯಾರೂ ಅನಿವಾರ್ಯವಲ್ಲ’ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಈ ಮಾತನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ಬಗ್ಗೆ ಹೇಳುವಂತಿಲ್ಲ. ಏಕೆಂದರೆ ಅವರಿಗೆ ಅವರೇ ಸಾಟಿ. 

ಅದರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಫೈನಲ್ ತಲುಪುವಲ್ಲಿ ಜೋಶ್ ಅವರ ಪಾತ್ರ ಮಹತ್ವದ್ದಾಗಿದೆ. ಶುಕ್ರವಾರ ಪಂಜಾಬ್ ಕಿಂಗ್ಸ್ ಎದುರು ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಜೋಶ್ ಅವರ (21ಕ್ಕೆ3) ಬೌಲಿಂಗ್ ಅಪಾರ ಪರಿಣಾಮಕಾರಿಯಾಗಿತ್ತು. ಅವರಿಗೆ ಸ್ಪಿನ್ನರ್ ಸುಯಶ್ ಶರ್ಮಾ (17ಕ್ಕೆ3) ಕೂಡ ಉತ್ತಮ ಜೊತೆ ನೀಡಿದ್ದರು. ಅದರಿಂದಾಗಿ ಆರ್‌ಸಿಬಿ ತಂಡವು 8 ವಿಕೆಟ್‌ಗಳಿಂದ ಜಯಿಸಿ, ಫೈನಲ್ ಪ್ರವೇಶಿಸಿತ್ತು. 

ಭುಜದ ಗಾಯದಿಂದಾಗಿ ಜೋಶ್ ಅವರು ಸುಮಾರು ಒಂದು ತಿಂಗಳಿನಿಂದ ಯಾವುದೇ ಪಂದ್ಯ ಆಡಿರಲಿಲ್ಲ. ಆದರೆ ಪಂಜಾಬ್ ಎದುರಿನ ಪಂದ್ಯದಲ್ಲಿ ಅವರ ಸಾಮರ್ಥ್ಯ ಉತ್ಕೃಷ್ಟಮಟ್ಟದಲ್ಲಿತ್ತು. ಇನಿಂಗ್ಸ್‌ನಲ್ಲಿ ತಮ್ಮ ಮೊದಲ ಓವರ್‌ನಲ್ಲಿಯೇ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಉರುಳಿಸಿದರು. ಇದು ಕಿಂಗ್ಸ್‌ ತಂಡಕ್ಕೆ ಕೊಟ್ಟ ಪ್ರಮುಖ ಪೆಟ್ಟಾಗಿತ್ತು. ನಂತರದ ಓವರ್‌ನಲ್ಲಿ ಉತ್ತಮ ಲಯದಲ್ಲಿರುವ ಬ್ಯಾಟರ್ ಜೋಶ್ ಇಂಗ್ಲಿಸ್ ಅವರ ವಿಕೆಟ್ ಕೂಡ ಜೋಶ್ ಪಾಲಾಯಿತು. 

ADVERTISEMENT

ಏಪ್ರಿಲ್ 27ರಂದು ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದ ಸಂದರ್ಭದಲ್ಲಿ ಜೋಶ್ ಗಾಯಗೊಂಡಿದ್ದರು. ಅದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಜೋಶ್ ಬೌಲಿಂಗ್‌ನಿಂದಾಗಿ ಆರ್‌ಸಿಬಿಯು ತನ್ನ ಎದುರಾಳಿಗಳನ್ನು 200 ರನ್‌ಗಳ ಒಳಗಿನ ಮೊತ್ತದಲ್ಲಿಯೇ ಕಟ್ಟಿಹಾಕಿತ್ತು.  ಆ ಅವಧಿಯ 10 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಎದುರಾಳಿ ತಂಡವು 200ರ ಗಡಿ ದಾಟಿತ್ತು. ಆದರೆ ಅವರು ಗಾಯಗೊಂಡು ಹೊರಗುಳಿದ ಅವಧಿಯ ಪಂದ್ಯಗಳಲ್ಲಿ ಆರ್‌ಸಿಬಿಯ ಬೌಲಿಂಗ್‌ ಸ್ವಲ್ಪ ದಿಕ್ಕು ತಪ್ಪಿತ್ತು. ಆ ಪಂದ್ಯಗಳಲ್ಲಿ ಎದುರಾಳಿಗಳಿಗೆ ದ್ವಿಶತಕದ ಮೊತ್ತ ಪೇರಿಸುವುದು ಸುಲಭವಾಗಿತ್ತು. 

6.5 ಅಡಿ ಎತ್ತರದ ಹ್ಯಾಜಲ್‌ವುಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳಷ್ಟು ಪರಿಣಾಮಕಾರಿ ಬೌಲರ್. ಚುಟುಕು ಮಾದರಿಯಲ್ಲಿಯೂ ಅವರ ಕೌಶಲಗಳು ಉತ್ತಮವಾಗಿವೆ. ಆದ್ದರಿಂದಲೇ ಅವರನ್ನು ಆರ್‌ಸಿಬಿಯು ₹ 12.5 ಕೋಟಿ ಕೊಟ್ಟು ಖರೀದಿಸಿತ್ತು. 2022ರಲ್ಲಿ ಜೋಶ್ ಅವರು ಆರ್‌ಸಿಬಿ ಪರವಾಗಿ 20 ವಿಕೆಟ್ ಗಳಿಸಿದ್ದರು. ಈ ಸಲವೂ 11 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. 

 ಆರ್‌ಸಿಬಿ ತಂಡದ ವೇಗಿ ಜೋಶ್ ಹ್ಯಾಜಲ್‌ವುಡ್ 

‘ಜೋಶ್ ನಮ್ಮ ತಂಡದ ಪ್ರಮುಖ ಆಟಗಾರ. ಅವರೊಬ್ಬ ವಿಶ್ವದರ್ಜೆಯ ಆಟಗಾರನಾಗಿದ್ದಾರೆ. ಅವರು ತಮ್ಮ ಬೌಲಿಂಗ್‌ನಲ್ಲಷ್ಟೇ ಅಲ್ಲ, ಶಾಂತಚಿತ್ತದ ಮೂಲಕವೂ ತಂಡದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದಾರೆ. ಭುವಿ (ಭುವನೇಶ್ವರ್ ಕುಮಾರ್) ಕೂಡ ತಮ್ಮ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಜೋಶ್ ತಂಡಕ್ಕೆ ಮರಳಿ ಬಂದಿರುವುದರಿಂದ ಬೌಲಿಂಗ್ ವಿಭಾಗದ ಮೌಲ್ಯವರ್ಧನೆಯಾಗಿದೆ’ ಎಂದು ಆರ್‌ಸಿಬಿಯ ಬ್ಯಾಟರ್ ಫಿಲ್ ಸಾಲ್ಟ್‌ ಸಂತಸ ವ್ಯಕ್ತಪಡಿಸಿದ್ದಾರೆ. 

ಜೂನ್ 11ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಆಡಲಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ಆಸ್ಟ್ರೇಲಿಯಾಕ್ಕೆ ಪ್ರಶಸ್ತಿ ಉಳಿಸಿಕೊಡುವ ಗುರಿ ಹ್ಯಾಜಲ್‌ವುಡ್ ಅವರದ್ದು. ಅದಕ್ಕೂ ಮುನ್ನ ಆರ್‌ಸಿಬಿಗೆ ಚೊಚ್ಚಲ ಟ್ರೋಫಿಯ ಕಾಣಿಕೆ ನೀಡುವ ಛಲವೂ ಅವರಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.