ವಿರಾಟ್ ಕೊಹ್ಲಿ
–ರಾಯಿಟರ್ಸ್ ಚಿತ್ರ
ದುಬೈ: ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಆಡಿದ ಆಟ ಅದ್ಭುತವಾಗಿತ್ತು. ಒತ್ತಡದ ನಡುವೆಯೂ ಕೊಹ್ಲಿ ಅಸಾಧಾರಣ ಪ್ರದರ್ಶನ ತೋರಿದರು ಎಂದು ಸಂಸದ ಅನುರಾಗ್ ಠಾಕೂರ್ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ವಿರಾಟ್ ಕೊಹ್ಲಿ ಒತ್ತಡದ ಹೇಗೆ ನಿಭಾಯಿಸಬೇಕು. ದೇಶಕ್ಕಾಗಿ ಹೇಗೆ ಆಡಬೇಕು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಅತ್ಯುತ್ತಮ ಇನ್ನಿಂಗ್ಸ್ ಮೂಲಕ ವಿರಾಟ್ ಪಂದ್ಯದ ಜತೆಗೆ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ವೈಯಕ್ತಿಕ ಇನ್ನಿಂಗ್ಸ್ ಮುಖ್ಯವಲ್ಲ, ದೇಶಕ್ಕಾಗಿ ಆಡುವ ಅವರ ಗುಣ ದೊಡ್ಡದು' ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಕೊಹ್ಲಿ ಅವರ ಶತಕ ಅದ್ಭುತವಾಗಿತ್ತು. ಕೊಹ್ಲಿ ಶತಕ ಗಳಿಸಿದ ರೀತಿಯು ಭಾರತ ತಂಡದ ಸ್ಥಿರ ಪ್ರದರ್ಶನಕ್ಕೆ ಕಾರಣವಾಯಿತು. ಶ್ರೇಯಸ್ ಮತ್ತು ಗಿಲ್ ಕೂಡ ತುಂಬಾ ಚೆನ್ನಾಗಿ ಆಡಿದರು. ಭಾರತ ತಂಡವು ಪೂರ್ಣ ಫಾರ್ಮ್ಗೆ ಮರಳಿದೆ. ಎಲ್ಲಾ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿದ್ದರು. ಪಾಕಿಸ್ತಾನವನ್ನು ಎದುರಿಸಲು ಸಿದ್ಧರಾಗಿದ್ದರು ಎಂಬುವುದನ್ನು ಆಟದ ಮೂಲಕ ಪ್ರದರ್ಶಿಸಿದ್ದಾರೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ದುಬೈಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ತಂಡವು 6 ವಿಕೆಟ್ಗಳಿಂದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿತು. ‘ಎ’ ಗುಂಪಿನಲ್ಲಿರುವ ಉಭಯ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಇದೆ. ಆದರೆ, ಪಾಕ್ ತಂಡವು ಸತತ ಎರಡೂ ಪಂದ್ಯಗಳಲ್ಲಿ ಸೋತು ಹೊರಬಿದ್ದಿದೆ.
ಆತಿಥೇಯ ಪಾಕ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡದ ಬೌಲರ್ಗಳ ದಾಳಿಯ ಎದುರು 241 ರನ್ಗಳ ಸಾಧಾರಣ ಗುರಿಯೊಡ್ಡಿತು. ಏಕದಿನ ಕ್ರಿಕೆಟ್ನಲ್ಲಿ 51ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ತಂಡವು 42.3 ಓವರ್ಗಳಲ್ಲಿ 4 ವಿಕೆಟ್ಗಳಿಗೆ 244 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.