
ಪಾಕಿಸ್ತಾನ ಕ್ರಿಕೆಟ್ ತಂಡ
ಅಬುಧಾಬಿ: ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ ಸೋತಿರುವುದು ಪಾಕಿಸ್ತಾನ ತಂಡದ ನೈತಿಕ ಸ್ಥೈರ್ಯಕ್ಕೆ ಯಾವುದೆ ಧಕ್ಕೆಯಾಗಿಲ್ಲ ಎಂದು ಪಾಕಿಸ್ತಾನ ತಂಡದ ಆಲ್ರೌಂಡರ್ ಹುಸೇನ್ ತಲಾತ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆಲ್ಲಿಸಿ ತಂಡಕ್ಕೆ ಎರಡು ನಿರ್ಣಾಯಕ ಅಂಕಗಳನ್ನು ಸೇರಿಸುವಲ್ಲಿ ಆಲ್ರೌಂಡರ್ ತಲಾತ್ ಪ್ರಮುಖ ಪಾತ್ರ ವಹಿಸಿದರು. ಶ್ರೀಲಂಕಾ ವಿರುದ್ಧ 133 ರನ್ ಚೇಸ್ ಮಾಡುವಾಗ ಪಾಕಿಸ್ತಾನ ತಂಡ 80 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಉತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು.
ಹುಸೇನ್ ತಲಾತ್ ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ 18 ರನ್ಗಳಿಗೆ 2 ವಿಕೆಟ್ ಹಾಗೂ ಅಜೇಯ 32 ರನ್ ಗಳಿಸಿದರು. ಇದು ಪಂದ್ಯ ಗೆಲ್ಲಲು ಸಹಕಾರಿಯಾಯಿತು. ಮಾತ್ರವಲ್ಲ, ತಂಡ ಫೈನಲ್ಗೇರುವ ಆಸೆಯನ್ನು ಜೀವಂತವಾಗಿರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಲಾತ್, ‘ಶ್ರೀಲಂಕಾ ವಿರುದ್ಧದ ಪಂದ್ಯ ಆಟಗಾರರಿಗೆ ನಿರಾಸೆ ಉಂಟು ಮಾಡಲಿಲ್ಲ. ಆದರೆ, ಭಾರತ ವಿರುದ್ಧದ ಪಂದ್ಯದಲ್ಲಿ ನಾವು ಉತ್ತಮ ಪ್ರಯತ್ನದ ಹೊರತಾಗಿಯೂ ಸೋತಿರುವುದು ತಂಡದ ಆಟಗಾರರಲ್ಲಿ ಸಮಾಧಾನ ಇರಲಿಲ್ಲ‘ ಎಂದರು.
‘ನಾವು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಬರುವಾಗ ಯಾವುದೇ ಒತ್ತಡ ಇರಲಿಲ್ಲ. ಭಾರತ ವಿರುದ್ಧದ ಸೋಲಿನ ಬಳಿಕ ಬಂದ ಟೀಕೆಗಳ ಹೊರತಾಗಿಯೂ ನಾವು ಸಹಜವಾಗಿದ್ದೆವು. ಹಾಗಾಗಿ ಶ್ರೀಲಂಕಾ ವಿರುದ್ಧ ಗೆಲ್ಲಲು ಸಾಧ್ಯವಾಯಿತು ಎಂದರು. ಕೆಲವೊಮ್ಮೆ ನಿರ್ಣಾಯಕ ಪಂದ್ಯಗಳ ಸಂದರ್ಭದಲ್ಲಿ ಬರುವಾಗ ಟೀಕೆಗಳು ಒಳ್ಳೆಯದಲ್ಲ‘ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.