ADVERTISEMENT

ಅಪಘಾತದ ನಂತರ ಪಂತ್‌ ಮೊದಲ ಪೋಸ್ಟ್‌: ಕಾಪಾಡಿದವರ ಚಿತ್ರ ಹಂಚಿಕೊಂಡ ಕ್ರಿಕೆಟರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2023, 15:45 IST
Last Updated 16 ಜನವರಿ 2023, 15:45 IST
ರಿಷಭ್‌ ಪಂತ್‌ ಹಂಚಿಕೊಂಡಿರುವ ಚಿತ್ರ
ರಿಷಭ್‌ ಪಂತ್‌ ಹಂಚಿಕೊಂಡಿರುವ ಚಿತ್ರ    

ನವದೆಹಲಿ: ಅಪಘಾತದ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಕ್ರಿಕೆಟರ್‌ ರಿಷಭ್‌ ಪಂತ್‌ ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದೇನೆ’ ಎಂದು ಹೇಳಿದ್ದಾರೆ.

‘ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ಉತ್ಸಾಹವೂ ಹೆಚ್ಚಿದೆ. ನಾನು ಪ್ರತಿದಿನ ಉತ್ತಮವಾಗುತ್ತಿದ್ದೇನೆ. ಈ ಕಷ್ಟದ ಸಮಯದಲ್ಲಿ ಸಿಕ್ಕ ನಿಮ್ಮ ಪ್ರೀತಿಯ ಮಾತುಗಳು, ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ’ ಎಂದು ಅವರು ಇನ್‌ಸ್ಟಾಗ್ರಾಂನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದರೊಂದಿಗೆ ಸ್ಪೈಡರ್‌ಮ್ಯಾನ್‌ನ ಗೊಂಬೆಯೊಂದನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವ ರಿಷಭ್‌, ‘Thankful, Grateful, Blessed’ ಎಂದು ಬರೆದಿದ್ದಾರೆ.

ADVERTISEMENT

ಅಪಘಾತದ ನಂತರ ತಮಗೆ ಸಹಾಯ ಮಾಡಿದ ಇಬ್ಬರು ಯುವಕರ (ರಜತ್ ಕುಮಾರ್ ಮತ್ತು ನಿಶು ಕುಮಾರ್) ಚಿತ್ರವನನ್ನು ಪಂತ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದೇ ಇರಬಹುದು. ಆದರೆ ನಾನು ಈ ಇಬ್ಬರು ವೀರರನ್ನು ಸ್ಮರಿಸಬೇಕು... ನನ್ನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದವರು ಇವರು. ಇವರಿಗೆ ನಾನು ಶಾಶ್ವತವಾಗಿ ಕೃತಜ್ಞನಾಗಿರುತ್ತೇನೆ’ ಎಂದು ಪಂತ್‌ ಹೇಳಿದ್ದಾರೆ.

2022ರ ಡಿ.30ರ ಬೆಳಗ್ಗೆ ದೆಹಲಿ-ಡೆಹ್ರಾಡೂನ್‌ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಕ್ರಿಕೆಟರ್‌ ರಿಷಭ್‌ ಪಂತ್‌ ಗಾಯಗೊಂಡಿದ್ದರು. ಅಪಘಾತ ಸನ್ನಿವಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಬೆಚ್ಚಿಬೀಳಿಸುವಂತಿತ್ತು.

ಅಪಘಾತದಲ್ಲಿ ಪಂತ್‌ ಅವರು ಮೈಮೇಲೆ ವಿಪರೀತ ತರಚಿದ ಗಾಯಗಳಾಗಿದ್ದವು. ಇದಕ್ಕಾಗಿ ವೈದ್ಯರು ಯಶಸ್ವಿ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿದ್ದಾರೆ. ಇನ್ನೊಂದೆಡೆ ಅವರ ಮಂಡಿ ಅಸ್ತಿ ರಜ್ಜು ಕೂಡ ಹಾನಿಯಾಗಿತ್ತು. ಅದಕ್ಕಾಗಿ ಶಸ್ತ್ರ ಚಿಕಿತ್ಸೆಯನ್ನೂ ನೆರವೇರಿಸಲಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಿಂದ ಮುಂಬೈಗೆ ವಿಮಾನ ಮೂಲಕ ಸ್ಥಳಾಂತರಿಸಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.