ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಭಾನುವಾರ ದೋಹಾ ಮೂಲಕ ಅಬುದಾಬಿಗೆ ವಾಣಿಜ್ಯ ವಿಮಾನ ಹಾರಾಟಕ್ಕೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸೇರಿದಂತೆ 11 ಮಂದಿ ಆಟಗಾರರಿಗೆ ಅನುಮತಿ ನಿರಾಕರಿಸಲಾಗಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ ಈ ಎಲ್ಲ ಕ್ರಿಕೆಟಿಗರೂ ಕ್ಲಿಯರನ್ಸ್ ಹೊಂದಿರದ ಕಾರಣ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ಐದು ಮಂದಿ ಆಟಗಾರರಿಗೆ ಮಾತ್ರ ವಿಮಾನವೇರಲು ಅನುಮತಿ ನೀಡಲಾಗಿದೆ. ಬಾಕಿ ಉಳಿದ ಆಟಗಾರರು ಕ್ವಾರಂಟೈನ್ ವಾಸಕ್ಕೆ ಹಿಂತಿರುಗಬೇಕಾಯಿತು. ಇವರೆಲ್ಲರೂ ಮೇ 24ರಿಂದ ಕ್ವಾರಂಟೈನ್ ವಾಸದಲ್ಲಿದ್ದಾರೆ ಎಂದು ವರದಿಯು ತಿಳಿಸಿದೆ.
ಕರಾಚಿ ಹಾಗೂ ಲಾಹೋರ್ನಿಂದ 25ರಷ್ಟು ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ಯುಎಇಗೆ ಪ್ರಯಾಣಿಸಬೇಕಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯುಎಇಗೆ ಪ್ರಯಾಣಿಸುವವರಿಗೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಇದರಂತೆ ಅಗತ್ಯ ಕ್ಲಿಯರೆನ್ಸ್ ಆಟಗಾರರು ಹೊಂದಿರಲಿಲ್ಲ ಎಂದು ವರದಿಯಾಗಿದೆ.
ಕೋವಿಡ್ನಿಂದಾಗಿ ನಿಂತು ಹೋಗಿರುವ ಪಿಎಸ್ಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಜೂನ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.