ADVERTISEMENT

ಜಿಂಬಾಬ್ವೆ ಸರಣಿಗೆ ಆಯ್ಕೆಯಾಗದಿರುವುದಕ್ಕೆ ಸ್ಪಷ್ಟನೆ ನೀಡಿದ ಕೆ.ಎಲ್‌ ರಾಹುಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2022, 8:42 IST
Last Updated 31 ಜುಲೈ 2022, 8:42 IST
   

ಬೆಂಗಳೂರು: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದೇ ಇರುವುದರ ಬಗ್ಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಅಭಿಮಾನಿಗಳಿಗೆ ಶನಿವಾರ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಅವರು ಶನಿವಾರ ರಾತ್ರಿ ಟ್ವೀಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

‘ನನ್ನ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ನಾನು ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಜೂನ್‌ನಲ್ಲಿ ನನಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್‌ನ ವಿರುದ್ಧದ ಪ್ರವಾಸಕ್ಕಾಗಿ ತಂಡಕ್ಕೆ ಮರಳುವ ವಿಶ್ವಾಸದೊಂದಿಗೆ ನಾನು ಅಭ್ಯಾಸವನ್ನೂ ಆರಂಭಿಸಿದ್ದೆ. ದುರದೃಷ್ಟವಶಾತ್, ಸಂಪೂರ್ಣ ಫಿಟ್‌ನೆಸ್‌ ಹೊಂದುತ್ತಲೇ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿತು. ಸ್ವಾಭಾವಿಕವಾಗಿ ನನಗೆ ಹಿನ್ನಡೆಯಾಯಿತು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಆದರೆ ನಾನು ಬೇಗನೆ ಚೇತರಿಸಿಕೊಳ್ಳುವ ಗುರಿ ಹೊಂದಿದ್ದೇನೆ. ಶೀಘ್ರದಲ್ಲೇ ಆಯ್ಕೆಗೆ ಲಭ್ಯವಾಗುತ್ತೇನೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅತ್ಯುನ್ನತ ಗೌರವ. ತಂಡಕ್ಕೆ ಮರಳಲು ನಾನು ಕಾತರನಾಗಿದ್ದೇನೆ‘ ಎಂದು ಅವರು ಹೇಳಿಕೊಂಡಿದ್ದಾರೆ.

ಮುಂದಿನ ತಿಂಗಳು ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಶನಿವಾರ ತಂಡ ಪ್ರಕಟಿಸಿದೆ.ಸರಣಿಯ ನಾಯಕತ್ವವನ್ನು ಶಿಖರ್‌ ಧವನ್‌ಗೆ ವಹಿಸಲಾಗಿದೆ.

ಹಲವು ಕಾರಣಗಳಿಂದಾಗಿ ಈ ಸರಣಿಯಿಂದ ಕೆ.ಎಲ್‌ ರಾಹುಲ್‌ ಅವರನ್ನು ಕೈಬಿಡಲಾಗಿದೆ. ಈ ಬೆಳವಣಿಗೆಯು ಅವರ ಟಿ20 ವಿಶ್ವಕಪ್ ಅವಕಾಶಗಳಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತ ಆಗಸ್ಟ್ 18, 20 ಮತ್ತು 22 ರಂದು ಜಿಂಬಾಬ್ವೆಯಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿದೆ.

ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೆಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.