ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟೀದಾರ್ ನೇಮಕ
ಇಂದೋರ್: ಆಯ್ಕೆದಾರರು 2025-26ನೇ ಸಾಲಿನ ರಣಜಿ ಟ್ರೋಫಿಗೆ ಮಧ್ಯಪ್ರದೇಶ ತಂಡದ ನಾಯಕನನ್ನಾಗಿ ಆರ್ಸಿಬಿ ತಂಡದ ಯಶಸ್ವಿ ನಾಯಕ, 32 ವರ್ಷದ ಬಲಗೈ ಬ್ಯಾಟರ್ ರಜತ್ ಪಾಟೀದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಂಪಿಸಿಎ) ಅಧಿಕಾರಿಯೊಬ್ಬರು ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದಾರೆ.
ರಜತ್ ಪಾಟೀದಾರ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಮಾಡಿದ್ದರು. ಅದಾದ ಬಳಿಕ ಅವರ ಅದೃಷ್ಟ ಬದಲಾಗಿದ್ದು, ಸದ್ಯ ನಡೆಯುತ್ತಿರುವ ಇರಾನಿ ಕಪ್ಗೆ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಅವರಿಗೆ ಮಧ್ಯಪ್ರದೇಶ ರಣಜಿ ತಂಡದ ನಾಯಕರನ್ನಾಗಿಯೂ ನೇಮಕ ಮಾಡಲಾಗಿದೆ.
ಅಧಿಕಾರಿಯ ಮಾಹಿತಿ ಪ್ರಕಾರ, ಮಧ್ಯಪ್ರದೇಶದ 15 ಸದಸ್ಯರ ರಣಜಿ ಟ್ರೋಫಿ ತಂಡ ಹೀಗಿದೆ: ರಜತ್ ಪಾಟೀದಾರ್ (ನಾಯಕ), ಯಶ್ ದುಬೆ, ಹರ್ಷ್ ಗಾವ್ಳಿ, ಶುಭಂ ಶರ್ಮಾ, ಹಿಮಾಂಶು ಮಂತ್ರಿ, ಹರ್ಪ್ರೀತ್ ಸಿಂಗ್, ವೆಂಕಟೇಶ್ ಅಯ್ಯರ್, ಸಾಗರ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರಾಂಶ್ ಜೈನ್, ಅಧೀರ್ ಪ್ರತಾಪ್, ಆರ್ಯನ್ ಪಾಂಡೆ, ಅರ್ಷದ್ ಖಾನ್, ಅನುಭವ್ ಅಗರ್ವಾಲ್ ಮತ್ತು ಕುಲದೀಪ್ ಸೇನ್ ಇದ್ದಾರೆ.
2025-26ನೇ ಸಾಲಿನ ರಣಜಿ ಟ್ರೋಫಿ ಅಕ್ಟೋಬರ್ 15 ರಿಂದ ಫೆಬ್ರವರಿ 28 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 15 ರಿಂದ ನವೆಂಬರ್ 19 ರವರೆಗೆ ನಡೆಯಲಿದ್ದು, ಎರಡನೇ ಸುತ್ತಿನ ಪಂದ್ಯಗಳು ಜನವರಿ 22 ರಿಂದ ಫೆಬ್ರವರಿ 1 ರವರೆಗೆ ನಡೆಯಲಿವೆ. ನಾಕೌಟ್ ಪಂದ್ಯಗಳು ಫೆಬ್ರವರಿ 6 ರಿಂದ 28 ರವರೆಗೆ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.