ಬೆಂಗಳೂರು: ಭಾನುವಾರ ತಡರಾತ್ರಿ ಮಳೆ ಸುರಿದ ಕಾರಣ ಆಲೂರಿನ ಕೆಎಸ್ಸಿಎ ಮೈದಾನವು ತೇವವಾಗಿದೆ. ಇದರಿಂದಾಗಿ ಸೋಮವಾರ ಬೆಳಿಗ್ಗೆ ಆರಂಭವಾಗಬೇಕಿದ್ದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯಗಳು ವಿಳಂಬವಾಗಿವೆ. 11.05ಕ್ಕೆ ಟಾಸ್ ಮಾಡಲಾಗುತ್ತಿದ್ದು, 11.20ಕ್ಕೆ ಪಂದ್ಯ ಶುರುವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ಕ್ರೀಡಾಂಗಣದಲ್ಲಿರುವ ಮೂರು ಮೈದಾನಗಳಲ್ಲಿ ಕ್ರಮವಾಗಿ ಕರ್ನಾಟಕ–ಉತ್ತರಪ್ರದೇಶ, ಮುಂಬೈ–ಉತ್ತರಾಖಂಡ ಮತ್ತು ಪಂಜಾಬ್–ಮಧ್ಯಪ್ರದೇಶ ನಡುವಣ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಪಿಚ್ ಮತ್ತು ಹೊರಾಂಗಣದಲ್ಲಿ ಹೆಚ್ಚು ತೇವವಿರುವ ಕಾರಣ ಒಂದು ಗಂಟೆ ಮುಂದೂಡಲಾಯಿತು. ಕ್ರೀಡಾಂಗಣದ ಸಿಬ್ಬಂದಿಯು ನೀರು ಹೊರಹಾಕುವ ಕಾರ್ಯನಿರ್ವಹಿಸಿದರು. 10.45ಕ್ಕೆ ಪಿಚ್ ಮತ್ತು ಹೊರಾಂಗಣವನ್ನು ಪರಿಶೀಲಿಸಿದ ಅಂಪೈರ್ ಮತ್ತು ರೆಫರಿ ಪಂದ್ಯ ಆರಂಭಿಸಲು ಹಸಿರುನಿಶಾನೆ ತೋರಿದರು.
ರಾಜಾನುಕುಂಟೆಯ ಸಮೀಪವಿರುವ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಜಾರ್ಖಂಡ್ ಮತ್ತು ಬಂಗಾಳ ನಡುವಣ ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯವು ಆರಂಭವಾಗಿದ್ದು ಬಂಗಾಳ ಬ್ಯಾಟಿಂಗ್ ಮಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.