ADVERTISEMENT

Ranji Trophy: ತಮಿಳುನಾಡು ವಿರುದ್ಧ ದೇವದತ್ತ ಪಡಿಕ್ಕಲ್ ಅಮೋಘ ಶತಕ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2024, 11:20 IST
Last Updated 9 ಫೆಬ್ರುವರಿ 2024, 11:20 IST
<div class="paragraphs"><p>ದೇವದತ್ತ ಪಡಿಕ್ಕಲ್</p></div>

ದೇವದತ್ತ ಪಡಿಕ್ಕಲ್

   

(ಪಿಟಿಐ ಚಿತ್ರ)

ಚೆನ್ನೈ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕದ ದೇವದತ್ತ ಪಡಿಕ್ಕಲ್ ಅಮೋಘ ಶತಕ (151*) ಸಾಧನೆ ಮಾಡಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ ನಿಗದಿತ 90 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ.

ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ 'ಸಿ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಂಕ್ ಅಗರವಾಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ನಾಯಕ ಮಯಂಕ್ 20 ರನ್ ಗಳಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ದೇವದತ್ತ ಪಡಿಕ್ಕಲ್ ಹಾಗೂ ರವಿಕುಮಾರ್ ಸಮರ್ಥ್ 132 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಸಮರ್ಥ್ ಆಕರ್ಷಕ ಅರ್ಧಶತಕ (57) ಸಾಧನೆ ಮಾಡಿದರು. ಈ ನಡುವೆ ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕ ಬ್ಯಾಟರ್‌ಗಳು ವೈಫಲ್ಯವನ್ನು ಅನುಭವಿಸಿದರು.

ನಿಕಿನ್ ಜೋಸ್ (13), ಮನೀಶ್ ಪಾಂಡೆ (1) ಹಾಗೂ ಕಿಶಾನ್ ಬೆದರೆ (3) ನಿರಾಸೆ ಮೂಡಿಸಿದರು.

ಮತ್ತೊಂದೆಡೆ ತಮಿಳುನಾಡು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪಡಿಕ್ಕಲ್ ಅಜೇಯ ಶತಕ ಸಾಧನೆ ಮಾಡಿದರು. ಅಜೇಯ 151 ರನ್ ಗಳಿಸಿರುವ ಪಡಿಕ್ಕಲ್ ಅವರಿಗೆ ಹಾರ್ದಿಕ್ ರಾಜ್ (35*) ಸಾಥ್ ನೀಡುತ್ತಿದ್ದಾರೆ. ಅಲ್ಲದೆ ಮುರಿಯದ ಆರನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ತಮಿಳುನಾಡು ಪರ ನಾಯಕ ಸಾಯ್ ಕಿಶೋರ್ ಮೂರು ವಿಕೆಟ್ ಕಬಳಿಸಿದ್ದಾರೆ.

ಅಗ್ರಸ್ಥಾನಕ್ಕಾಗಿ ಪೈಪೋಟಿ...

ಸದ್ಯ ತಮಿಳುನಾಡು ಪ್ರಥಮ ಹಾಗೂ ಕರ್ನಾಟಕ ಎರಡನೇ ಸ್ಥಾನದಲ್ಲಿವೆ. ಉಭಯ ತಂಡಗಳ ಖಾತೆಯಲ್ಲಿಯೂ ತಲಾ 21 ಅಂಕಗಳು ಇವೆ. ಆದರೆ ನೆಟ್‌ ರನ್‌ರೇಟ್ ಆಧಾರದಲ್ಲಿ ತಮಿಳುನಾಡು ಸ್ವಲ್ಪ ಮುಂದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡವು ಗೆದ್ದರೆ ಅಗ್ರಸ್ಥಾನಕ್ಕೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.