
ಶಿವಮೊಗ್ಗ: ವೇಗಿಗಳಿಗೆ ನೆರವು ನೀಡುತ್ತಿರುವ ಇಲ್ಲಿನ ಪಿಚ್ನಲ್ಲಿ ಸೋಮವಾರ ಕರ್ನಾಟಕದ ಅಭಿಲಾಷ್ ಶೆಟ್ಟಿ (63ಕ್ಕೆ3) ಮತ್ತು ವಿದ್ವತ್ ಕಾವೇರಪ್ಪ (30ಕ್ಕೆ2) ಬಿಗುವಿನ ದಾಳಿ ನಡೆಸಿದರು.
ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೂರನೇ ದಿನದಾಟದ ಮೊದಲ ಎರಡು ಅವಧಿಯಲ್ಲಿ ಗೋವಾ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಕಂಗೆಡಿಸಿ ಇವರು, ಆತಿಥೇಯರ ಇನಿಂಗ್ಸ್ ಮುನ್ನಡೆ ಕನಸಿಗೆ ಬಲ ತುಂಬಿದರು.
ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ ದಾಖಲಿಸಿರುವ 371ರನ್ಗಳಿಗೆ ಉತ್ತರವಾಗಿ ಗೋವಾ 77 ಓವರ್ಗಳಲ್ಲಿ 6 ವಿಕೆಟ್ಗೆ 171 ರನ್ ಗಳಿಸಿ, 200 ರನ್ಗಳ ಹಿನ್ನಡೆಯಲ್ಲಿದೆ. ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್ (ಬ್ಯಾಟಿಂಗ್ 43; 115 ಎ, 5ಬೌಂ, 1ಸಿ) ಮತ್ತು ಮೋಹಿತ್ ರೆಡ್ಕರ್ (ಬ್ಯಾಟಿಂಗ್ 24; 54ಎ, 2ಬೌಂ) ಆಸರೆಯಾಗಿದ್ದಾರೆ.
13 ಓವರ್ಗಳಲ್ಲಿ 1 ವಿಕೆಟ್ಗೆ 28 ರನ್ಗಳಿಂದ ಆಟ ಮುಂದುವರಿಸಿದ ಸ್ನೇಹಲ್ ಕೌತಂಕರ್ ಬಳಗ ಈ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಸುಯಶ್ ಪ್ರಭುದೇಸಾಯಿ (12; 42ಎ, 1ಬೌಂ) ವಿಕೆಟ್ ಕಳೆದುಕೊಂಡಿತು. ದಿನದ ಎರಡನೇ ಓವರ್ನ ಮೊದಲ ಎಸೆತದಲ್ಲೇ ವಿದ್ವತ್ ಕಾವೇರಪ್ಪ ಆಘಾತ ನೀಡಿದರು. ನಾಯಕ ಸ್ನೇಹಲ್ (10) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಎಡಗೈ ವೇಗಿ ಅಭಿಲಾಷ್ ಹಾಕಿದ ಇನಿಂಗ್ಸ್ನ 18ನೇ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ ಶ್ರೀಜಿತ್ಗೆ ಕ್ಯಾಚ್ ನೀಡಿದರು.
ಚಂಡೀಗಢ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಗೋವಾ ಗೆಲುವಿಗೆ ಕಾರಣರಾಗಿದ್ದ ಅಭಿನವ್ ತೇಜ್ರಾಣಾ (18; 40ಎ, 3ಬೌಂ) ಮತ್ತು ಲಲಿತ್ ಯಾದವ್ (36; 96ಎ, 3ಬೌಂ) ಅವರಿಗೆ ಇಲ್ಲಿ ಬೇರೂರಲು ಕರ್ನಾಟಕದ ವೇಗಿಗಳು ಅವಕಾಶ ನೀಡಲಿಲ್ಲ.
19ನೇ ಓವರ್ನಲ್ಲಿ ವಿದ್ವತ್ ಹಾಕಿದ ಬೌನ್ಸರ್ ಅಂದಾಜಿಸುವಲ್ಲಿ ಅಭಿನವ್ ಎಡವಿದರು. ಅವರ ಬ್ಯಾಟಿನ ಅಂಚಿಗೆ ತಾಗಿ ತಮ್ಮತ್ತ ಬಂದ ಚೆಂಡನ್ನು ಎರಡನೇ ಸ್ಲಿಪ್ನಲ್ಲಿದ್ದ ನಿಕಿನ್ ಜೋಸ್ ಹಿಡಿತಕ್ಕೆ ಪಡೆದರು. ಊಟದ ವಿರಾಮದ ವೇಳೆಗೆ ನಾಲ್ಕು ವಿಕೆಟ್ ಪಡೆದು 74 ರನ್ಗಳನ್ನಷ್ಟೇ ಬಿಟ್ಟುಕೊಟ್ಟಿದ್ದ ಕರ್ನಾಟಕ, ಬೇಗನೇ ಆಲೌಟ್ ಮಾಡುವ ಆಲೋಚನೆಯಲ್ಲಿತ್ತು. ಆದರೆ ಲಲಿತ್ ಮತ್ತು ದರ್ಶನ್ ಮಿಸಾಳ್ (12) ಎರಡನೇ ಅವಧಿಯಲ್ಲಿ ಎಚ್ಚರಿಕೆಯಿಂದ ಆಡಿ ತಂಡದ ಮೊತ್ತವನ್ನು ಶತಕದ ಗಡಿ ಮುಟ್ಟಿಸಿದರು. ಯಶೋವರ್ಧನ್ ಪರಂತಾಪ್ 44ನೇ ಓವರ್ನ ಕೊನೆಯ ಎಸೆತದಲ್ಲಿ ದರ್ಶನ್ ವಿಕೆಟ್ ಪಡೆದು 49ರನ್ಗಳ 5ನೇ ವಿಕೆಟ್ ಜೊತೆಯಾಟ ಮುರಿದರು. ತಂಡದ ಖಾತೆಗೆ ಮತ್ತೆ 15ರನ್ ಸೇರುವಷ್ಟರಲ್ಲಿ ಲಲಿತ್ ಕೂಡ ಔಟಾದರು.
ಈ ಹಂತದಲ್ಲಿ ಒಂದಾದ ಅರ್ಜುನ್ ಮತ್ತು ಮೋಹಿತ್ ಜಾಗರೂಕತೆಯಿಂದ ಆಡಿ ಇನಿಂಗ್ಸ್ ಬೆಳೆಸಿದರು. ಮುರಿಯದ 7ನೇ ವಿಕೆಟ್ ಪಾಲುದಾರಿಕೆಯಲ್ಲಿ 56ರನ್ ಕಲೆಹಾಕಿ ಆಲೌಟ್ ಮಾಡುವ ಕರ್ನಾಟಕದ ಕನಸಿಗೆ ತಣ್ಣೀರೆರಚಿದರು. ಒಂದು ಗಂಟೆ ತಡವಾಗಿ ಆರಂಭವಾದ ದಿನದಾಟ ಮಂದ ಬೆಳಕಿನ ಕಾರಣ ಸಂಜೆ 4.30ಕ್ಕೇ ಕೊನೆಗೊಂಡಿತು.
ನಿಯಮದ ಅನುಸಾರ ಮೂರು ಇಲ್ಲವೇ ನಾಲ್ಕು ದಿನಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ 150 ಹಾಗೂ ಅದಕ್ಕಿಂತ ಹೆಚ್ಚಿನ ರನ್ಗಳ ಮುನ್ನಡೆ ಗಳಿಸಿದ್ದೇ ಆದರೆ ಎದುರಾಳಿಗಳ ಮೇಲೆ ಫಾಲೋ ಆನ್ ಹೇರಬಹುದು. ಆ ಮೊತ್ತಕ್ಕೇ ಎದುರಾಳಿ ತಂಡವನ್ನು ಮತ್ತೊಮ್ಮೆ ಕಟ್ಟಿ ಹಾಕಿ ಇನಿಂಗ್ಸ್ ಗೆಲುವು ಪಡೆಯಬಹುದು. ಆ ಮೂಲಕ 7 ಅಂಕ ಗಳಿಸಲೂಬಹುದು. ಗೋವಾ ತಂಡವನ್ನು 221ರನ್ಗಳ ಒಳಗೆ ಕಟ್ಟಿ ಹಾಕಿದರೆ ಕರ್ನಾಟಕಕ್ಕೆ ಫಾಲೋ ಆನ್ ಅವಕಾಶ ಸಿಗಲಿದೆ. ಒಂದೊಮ್ಮೆ ಸಿಕ್ಕರೆ ಮಯಂಕ್ ಯಾವ ನಿರ್ಣಯ ಕೈಗೊಳ್ಳುತ್ತಾರೆ ಎಂಬ ಕುತೂಹಲ ಈಗ ಗರಿಗೆದರಿದೆ. ಕೊನೆಯ ದಿನದ ಆಟವಷ್ಟೇ ಬಾಕಿ ಇರುವುದರಿಂದ ಗೆಲುವು ದೂರದ ಮಾತು. ಹೀಗಾಗಿ ಮಯಂಕ್ ಫಾಲೋ ಆನ್ ಗೊಡವೆಗೆ ಹೋಗದೆ ಎರಡನೇ ಇನಿಂಗ್ಸ್ ಆರಂಭಿಸುತ್ತಾರೆಯೇ? ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ಮೊದಲ ಇನಿಂಗ್ಸ್: ಕರ್ನಾಟಕ: 110.1 ಓವರ್ಗಳಲ್ಲಿ 371
ಗೋವಾ: 77 ಓವರ್ಗಳಲ್ಲಿ 6 ವಿಕೆಟ್ಗೆ 171(ಭಾನುವಾರ 13 ಓವರ್ಗಳಲ್ಲಿ 1 ವಿಕೆಟ್ಗೆ 28)
ಸುಯಶ್ ಪ್ರಭುದೇಸಾಯಿ ಸಿ ಶ್ರೀಜಿತ್ ಬಿ ವಿದ್ವತ್ 12 (42ಎ, 4X1)
ಅಭಿನವ್ ತೇಜ್ರಾಣಾ ಸಿ ನಿಕಿನ್ ಜೋಸ್ ಬಿ ವಿದ್ವತ್ 18 (40ಎ, 4X3)
ಸ್ನೇಹಲ್ ಕೌತಂಕರ್ ಸಿ ಶ್ರೀಜಿತ್ ಬಿ ಅಭಿಲಾಷ್ 10 (15ಎ, 4X1)
ಲಲಿತ್ ಯಾದವ್ ಸಿ ಯಶೋವರ್ಧನ್ ಬಿ ಅಭಿಲಾಷ್ 36 (96ಎ, 4X3)
ದರ್ಶನ್ ಮಿಸಾಳ್ ಸಿ ಕರುಣ್ ಬಿ ಯಶೋವರ್ಧನ್ 12 (84ಎ, 4X1)
ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ 43 (115ಎ, 4X5, 6X1)
ಮೋಹಿತ್ ರೆಡ್ಕರ್ ಬ್ಯಾಟಿಂಗ್ 24 (54ಎ, 4X2)
ಇತರೆ: 7 (ನೋಬಾಲ್ 1, ಬೈ 2, ಲೆಗ್ ಬೈ 4).
ವಿಕೆಟ್ ಪತನ: 2–29 (ಸುಯಶ್; 14.1), 3–47 (ಸ್ನೇಹಲ್; 17.5), 4–51 (ಅಭಿನವ್; 18.6), 5–100 (ದರ್ಶನ್; 43.6), 6–115 (ಲಲಿತ್; 53.2).
ಬೌಲಿಂಗ್: ವಿದ್ವತ್ ಕಾವೇರಪ್ಪ 18–5–30–2, ಅಭಿಲಾಷ್ ಶೆಟ್ಟಿ 18–3–63–3, ಯಶೋವರ್ಧನ್ ಪರಂತಾಪ್ 16–6–18–1, ವೈಶಾಖ್ ವಿಜಯಕುಮಾರ್ 17–2–41–0, ಶ್ರೇಯಸ್ ಗೋಪಾಲ್ 8–2–13–0.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.