ADVERTISEMENT

Ranji Trophy: ಪುದುಚೇರಿ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 20 ರನ್ ಜಯ

ಪಾಂಡೆ ಪಡೆಗೆ 2ನೇ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2022, 7:14 IST
Last Updated 6 ಮಾರ್ಚ್ 2022, 7:14 IST
ದೇವದತ್ತ ಪಡಿಕ್ಕಲ್‌
ದೇವದತ್ತ ಪಡಿಕ್ಕಲ್‌   

ಚೆನ್ನೈ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು, ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 20 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಜಯ ದಾಖಲಿಸಿದೆ.

ಎಸ್‌ಎನ್‌ಎನ್‌ ಕಾಲೇಜು ಮೈದಾನದಲ್ಲಿ ನಡೆದ 'ಸಿ' ಗುಂಪಿನ ಪಂದ್ಯದಲ್ಲಿ, ಮನೀಷ್ ಪಡೆ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.ಕರ್ನಾಟಕದ ಬ್ಯಾಟರ್‌ಗಳುಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು.

ದೇವದತ್ತ ಪಡಿಕ್ಕಲ್‌ (178) ಮತ್ತು ಮನೀಷ್ ಪಾಂಡೆ (107) ಶತಕ ಸಿಡಿಸಿದರೆ, ಕೆ. ಸಿದ್ದಾರ್ಥ್ 85 ರನ್‌ ಬಾರಿಸಿ ಮಿಂಚಿದರು. ಇದರಿಂದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 453 ರನ್ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು.

ADVERTISEMENT

ಅದಕ್ಕೆ ತಕ್ಕಂತೆ ಆಡಿದ ಬೌಲರ್‌ಗಳು,ಪುದುಚೇರಿಯನ್ನು ಮೊದಲ ಇನಿಂಗ್ಸ್‌ನಲ್ಲಿ241 ರನ್‌ಗಳಿಗೆ ಕಟ್ಟಿಹಾಕಿದರು. 212 ರನ್‌ ಮುನ್ನಡೆ ಸಾಧಿಸಿದ ಪಾಂಡೆ ಪಡೆ, ಪುದುಚೇರಿಗೆ ಫಾಲೋಆನ್ ಹೇರಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದಾಮೋದರನ್‌ ರೋಹಿತ್ ಪಡೆ ಎರಡನೇ ಇನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿತು. ಕೇವಲ 194 ರನ್‌ ಗಳಿಗೆ ಆಲೌಟ್‌ ಆಗುವುದರೊಂದಿಗೆ ಸುಲಭ ಸೋಲೊಪ್ಪಿಕೊಂಡಿತು.

ಶ್ರೇಯಸ್ ಗೋಪಾಲ್ ಐದು ವಿಕೆಟ್ ಗೊಂಚಲು ಜೇಬಿಗಿಳಿಸಿಕೊಂಡರೆ, ಪ್ರಸಿದ್ಧ ಕೃಷ್ಣ 3 ವಿಕೆಟ್ ಉರುಳಿಸಿದರು. ವಿದ್ಯಾಧರ್‌ ಪಾಟೀಲ ಮತ್ತು ಕೆ.ಗೌತಮ್‌ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ದೇವದತ್ತ ಪಡಿಕ್ಕಲ್‌ ಪಂದ್ಯ ಶ್ರೇಷ್ಠ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.