ADVERTISEMENT

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ಭಾರತ ತಂಡ: ಮರಳಿದ ಹಾರ್ದಿಕ್‌, ಶಿಖರ್‌

ಮಯಂಕ್‌, ರೋಹಿತ್‌ ‘ಔಟ್‌’

ರಾಯಿಟರ್ಸ್
Published 8 ಮಾರ್ಚ್ 2020, 19:45 IST
Last Updated 8 ಮಾರ್ಚ್ 2020, 19:45 IST
ಹಾರ್ದಿಕ್‌ ಪಾಂಡ್ಯ (ಎಡ) ಮತ್ತು ಶಿಖರ್‌ ಧವನ್‌
ಹಾರ್ದಿಕ್‌ ಪಾಂಡ್ಯ (ಎಡ) ಮತ್ತು ಶಿಖರ್‌ ಧವನ್‌   

ನವದೆಹಲಿ: ಗಾಯದಿಂದ ಗುಣಮುಖರಾಗಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಭಾರತ ತಂಡಕ್ಕೆ ಮರಳಿದ್ದಾರೆ.

ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಭಾನುವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಹಾರ್ದಿಕ್‌ ಮತ್ತು ಶಿಖರ್‌ಗೆ ಅವಕಾಶ ನೀಡಲಾಗಿದೆ.

ನ್ಯೂಜಿಲೆಂಡ್‌ ಎದುರಿನ ಸರಣಿಯ ವೇಳೆ ಗಾಯಗೊಂಡಿದ್ದ ರೋಹಿತ್‌ ಶರ್ಮಾ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ADVERTISEMENT

ಹಾರ್ದಿಕ್‌ ಅವರು ಹೋದ ವರ್ಷದ ಅಕ್ಟೋಬರ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಗುಣಮುಖರಾದ ಬಳಿಕ ಡಿ.ವೈ.ಪಾಟೀಲ ಕಪ್‌ ಟ್ವೆಂಟಿ–20 ಟೂರ್ನಿಯಲ್ಲಿ ರಿಲಯನ್ಸ್‌ ಒನ್‌ ತಂಡದ ಪರ ಕಣಕ್ಕಿಳಿದಿದ್ದ ಅವರು ಎರಡು ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು.

ಮಧ್ಯಮ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರೂ ತಂಡಕ್ಕೆ ಮರಳಿದ್ದಾರೆ. ಕರ್ನಾಟಕದ ಮಯಂಕ್‌ ಅಗರವಾಲ್‌, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌, ಆಲ್‌ರೌಂಡರ್‌ ಶಿವಂ ದುಬೆ ಮತ್ತು ಮಧ್ಯಮ ವೇಗದ ಬೌಲರ್‌ಗಳಾದ ಶಾರ್ದೂಲ್‌ ಠಾಕೂರ್‌ ಹಾಗೂ ಮೊಹಮ್ಮದ್‌ ಶಮಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಪಂದ್ಯ ಇದೇ ತಿಂಗಳ 12ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ನಂತರದ ಪಂದ್ಯಗಳು ಲಖನೌ (15) ಮತ್ತು ಕೋಲ್ಕತ್ತದಲ್ಲಿ (18) ನಿಗದಿಯಾಗಿವೆ.

ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ಅವರು ಸ್ಥಾನ ಉಳಿಸಿಕೊಂಡಿದ್ದಾರೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಪೃಥ್ವಿ ಶಾ, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ನವದೀಪ್‌ ಸೈನಿ, ಕುಲದೀಪ್‌ ಯಾದವ್‌ ಮತ್ತು ಶುಭಮನ್‌ ಗಿಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.