ADVERTISEMENT

T20 WC: ಟೀಮ್ ಇಂಡಿಯಾದಲ್ಲಿ ಬದಲಾವಣೆ; ಅಕ್ಷರ್ ಸ್ಥಾನಕ್ಕೆ ಶಾರ್ದೂಲ್ ಆಯ್ಕೆ

ಪಿಟಿಐ
Published 13 ಅಕ್ಟೋಬರ್ 2021, 13:14 IST
Last Updated 13 ಅಕ್ಟೋಬರ್ 2021, 13:14 IST
ಶಾರ್ದೂಲ್ ಠಾಕೂರ್
ಶಾರ್ದೂಲ್ ಠಾಕೂರ್   

ನವದೆಹಲಿ: ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗಾಗಿ ಆರಿಸಲಾದ ಟೀಮ್ ಇಂಡಿಯಾದಲ್ಲಿ ಒಂದು ಗಮನಾರ್ಹ ಬದಲಾವಣೆ ತರಲಾಗಿದ್ದು, ಅಕ್ಷರ್ ಪಟೇಲ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ.

ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಯಾಗುತ್ತಿರುವ ಟ್ವೆಂಟಿ-20 ವಿಶ್ವಕಪ್‌ಗಾಗಿ 15 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಇತ್ತೀಚೆಗಷ್ಟೇ ಬಿಸಿಸಿಐ ಘೋಷಿಸಿತ್ತು. ಹೆಚ್ಚುವರಿ ಆಟಗಾರರಾಗಿ ಶಾರ್ದೂಲ್ ಠಾಕೂರ್ ಸೇರಿದಂತೆ ಮೂವರನ್ನು ಕಾಯ್ದಿರಿಸಲಾಗಿತ್ತು. ಇದೀಗ ತಂಡದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಅಕ್ಷರ್ ಸ್ಥಾನಕ್ಕೆ ಶಾರ್ದೂಲ್‌ಗೆ ಅವಕಾಶ ಕಲ್ಪಿಸಲಾಗಿದೆ.

ಅಕ್ಟೋಬರ್ 15ರ ವರೆಗೆ ಮೂಲ ತಂಡದಲ್ಲಿ ಬದಲಾವಣೆ ತರುವ ಅವಕಾಶವಿರುತ್ತದೆ. ಇದರೊಂದಿಗೆ ಎಡಗೈ ಆಲ್‌ರೌಂಡರ್ ಅಕ್ಷರ್ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ಪ್ರಸಕ್ತ ಸಾಗುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವುದೇ ಶಾರ್ದೂಲ್ ಆಯ್ಕೆಗೆ ಕಾರಣವಾಗಿದೆ. 29 ವರ್ಷದ ಶಾರ್ದೂಲ್ ಈಗಾಗಲೇ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಜೊತೆಗೆ ಚರ್ಚಿಸಿದ ಬಳಿಕ ಆಯ್ಕೆ ಸಮಿತಿಯು ಬದಲಾವಣೆಯನ್ನು ತಂದಿದೆ. ಹಾರ್ದಿಕ್‌ ಪಾಂಡ್ಯ ಫಿಟ್ನೆಸ್‌ ಸಮಸ್ಯೆಯು ತಂಡಕ್ಕೆ ಕಳವಳಕಾರಿಯಾಗಿದ್ದು, ಆಲ್‌ರೌಂಡರ್ ಕೊರತೆ ಎದುರಾಗಿದೆ.

ಭಾರತ ತಂಡ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ.

ಹೆಚ್ಚುವರಿ ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ಮತ್ತು ಅಕ್ಷರ್ ಪಟೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.