ಬೆಂಗಳೂರು: ಟೀಮ್ ಇಂಡಿಯಾದ ಉದಯೋನ್ಮುಖ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಇಂದು ತಮ್ಮ ವೃತ್ತಿ ಜೀವನದ ಮೊದಲ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಅವರು ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ–ನ್ಯೂಜಿಲೆಂಡ್ನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ದಿನ ಅವರಿಗೆ ಸ್ಮರಣೀಯ ಎನಿಸುವ ಘಟನೆ ನಡೆದಿದೆ.
ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರನ್ನು ಕ್ರೀಡಾಂಗಣದಲ್ಲಿ ಭೇಟಿಯಾದ ಟೀಮ್ ಇಂಡಿಯಾ ಆಟಗಾರರು, ಅವರಿಂದ ಸಲಹೆ ಸೂಚನೆ ಪಡೆದರು.
ಈ ವೇಳೆ ವಿಶೇಷವಾಗಿ ಸುನೀಲ್ ಗಾವಸ್ಕರ್ ಅವರು ಶ್ರೇಯಸ್ ಅಯ್ಯರ್ಗೆ ಅಭಿನಂದನೆ ತಿಳಿಸಿ, ಟೆಸ್ಟ್ ಕ್ಯಾಪ್ (ಟೋಪಿ) ಉಡುಗೊರೆನೀಡಿದರು. ಇದಕ್ಕೆ ಚುಂಬನ ನೀಡಿ ತಲೆಗೆ ಹಾಕಿಕೊಂಡ ಶ್ರೇಯಸ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು.
ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಿಸಿ, ‘ಸುನೀಲ್ ಗಾವಸ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಶ್ರೇಯಸ್ ಅಯ್ಯರ್ಗೆ ಇದೊಂದು ಅವಿಸ್ಮರಣೀಯ ಕ್ಷಣ’ ಎಂದು ಟ್ವೀಟಿಸಿದೆ.
ಮುಂಬೈ ಮೂಲದ ಶ್ರೇಯಸ್ ಅಯ್ಯರ್ ಪ್ರಥಮ ದರ್ಜೆಯ ಕ್ರಿಕೆಟ್ನಲ್ಲಿ ಸರಾಸರಿ 52 ರನ್ರೇಟ್ನೊಂದಿಗೆ 12 ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಆಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.