
ಮುಂಬೈ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂದು (ಭಾನುವಾರ) ನಡೆಯಬೇಕಿದ್ದ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಸಂಗೀತಗಾರ ಪಾಲಾಶ್ ಮುಚ್ಛಲ್ ಅವರ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂದಾನ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ತಂಡ ನಿಗಾ ವಹಿಸಿದೆ. ಸ್ಮೃತಿ ಅವರ ಇಚ್ಛೆಯಂತೆ ಮದುವೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ’ ಎಂದು ಕುಟುಂಬದ ಸಹಾಯಕಿ ತುಹಿನ್ ಮಿಶ್ರಾ ತಿಳಿಸಿದ್ದಾರೆ.
ನವೆಂಬರ್ 21ರಂದು (ಶುಕ್ರವಾರ) ಸ್ಮೃತಿ ಮಂದಾನ ಮತ್ತು ಪಾಲಾಶ್ ಮುಚ್ಛಲ್ ನಿಶ್ಚಿತಾರ್ಥ ನೆರವೇರಿತ್ತು. ಈ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದರು.
ವಿವಾಹಪೂರ್ವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಭಾರತ ತಂಡದ ಆಟಗಾರ್ತಿಯರಾದ ರಾಧಾ ಯಾದವ್, ಜೆಮಿಮಾ ರಾಡ್ರಿಗಸ್, ಶ್ರೇಯಾಂಕಾ ಪಾಟೀಲ್ ಹಾಗೂ ಅರುಂಧತಿ ರೆಡ್ಡಿ ಅವರು ಸ್ಮೃತಿ ಅವರೊಂದಿಗೆ ನೃತ್ಯ ಮಾಡಿರುವ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ನಿಶ್ಚಿತಾರ್ಥದ ವೇಳೆ ತೊಡಿಸಿರುವ ಉಂಗುರವನ್ನು ಸ್ಮೃತಿ ಅವರು ತೋರಿಸಿದ್ದು, ವಿಡಿಯೊ ತುಣುಕು ವ್ಯಾಪಕವಾಗಿ ಹರಿದಾಡಿತ್ತು.
ಆರ್ಸಿಬಿ ಮಹಿಳಾ ತಂಡದ ನಾಯಕಿಯೂ ಆಗಿರುವ ತಾರಾ ಬ್ಯಾಟರ್ ಸ್ಮೃತಿ ಹಾಗೂ ಪಾಲಾಶ್ ನಡುವೆ 2019ರಲ್ಲಿ ಸ್ನೇಹ ಚಿಗುರಿತ್ತು ಎನ್ನಲಾಗಿದೆ. ಪಾಲಾಶ್ ಅವರು ಬಾಲಿವುಡ್ನಲ್ಲಿ ನಿರ್ದೇಶಕ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.