ADVERTISEMENT

ಮೊಬೈಲ್ ನೆಟ್‌ವರ್ಕ್‌ಗಾಗಿ ಮರ ಹತ್ತಿದ ಅಂಪೈರ್!

ಪಿಟಿಐ
Published 10 ಏಪ್ರಿಲ್ 2020, 20:11 IST
Last Updated 10 ಏಪ್ರಿಲ್ 2020, 20:11 IST
ಅನಿಲ್ ಚೌಧರಿ
ಅನಿಲ್ ಚೌಧರಿ   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ ಅವರು ಮೊಬೈಲ್ ನೆಟ್‌ವರ್ಕ್‌ಗಾಗಿ ಏನು ಮಾಡಿದರು ಗೊತ್ತೆ?

ಕೊರೊನಾ ವೈರಸ್‌ ಹಾವಳಿಯಿಂದಾಗಿ ಇಡೀ ದೇಶ ದಿಗ್ಬಂಧನದಲ್ಲಿದೆ. ಇದರಿಂದಾಗಿ ತಮ್ಮ ಗ್ರಾಮಕ್ಕೆ ತೆರಳಿರುವ ಅನಿಲ್ ಅವರಿಗೆ ಮೊಬೈಲ್ ಸಂಪರ್ಕ ಪಡೆಯುವುದೇ ದೊಡ್ಡ ಸಾಹಸವಾಗಿದೆ. ಅದಕ್ಕಾಗಿ ಅವರು ನೆಟ್‌ವರ್ಕ್‌ಗಾಗಿ ಎತ್ತರದ ಮರವೊಂದನ್ನು ಏರಿ ಕುಳಿತ ಘಟನೆ ನಡೆದಿದೆ.

‘ಮಾರ್ಚ್‌ 16ರಿಂದ ನನ್ನ ಮಕ್ಕಳೊಂದಿಗೆ ಇದೇ ಗ್ರಾಮದಲ್ಲಿದ್ದೇನೆ. ಇದು ನಮ್ಮ ಪೂರ್ವಜರ ಊರು. ಬಹಳ ವರ್ಷಗಳಿಂದ ಬಂದಿರಲಿಲ್ಲ. ಒಂದು ವಾರ ಇರಲು ಯೋಚಿಸಿ ಬಂದಿದ್ದೆ. ಆದರೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಇಲ್ಲಿಯೇ ಉಳಿಯಬೇಕಾಯಿತು. ನನ್ನ ತಾಯಿ ಮತ್ತು ಪತ್ನಿ ಇಬ್ಬರೂ ದೆಹಲಿಯಲ್ಲಿದ್ದಾರೆ’ ಎಂದು ಅನಿಲ್ ತಿಳಿಸಿದ್ದಾರೆ.

ADVERTISEMENT

20 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು, 27 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅನಿಲ್ ಕಾರ್ಯನಿರ್ವಹಿಸಿದ್ದಾರೆ. 55 ವರ್ಷದ ಅನಿಲ್ ಅವರು ಸದ್ಯ ತಮ್ಮ ತವರು ಗ್ರಾಮ ಡಂಗ್ರೋಲ್ (ಉತ್ತರಪ್ರದೇಶ ರಾಜ್ಯ)ಗೆ ಇಬ್ಬರು ಪುತ್ರರೊಂದಿಗೆ ತೆರಳಿದ್ದಾರೆ.

‘ಇಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಸಿಗುವುದು ಕಷ್ಟ. ಇಂಟರ್‌ನೆಟ್‌ ಬಳಸಲು ಸಾಧ್ಯವಾಗುತ್ತಿಲ್ಲ. ಬೇರೆಯವರೊಂದಿಗೆ ಮಾತನಾಡಲೂ ಅಡಚಣೆಯಾಗುತ್ತಿದೆ. ಹಳ್ಳಿಯಿಂದ ಹೊರಗೆ ಹೋಗಬೇಕು, ಮರ ಏರಿ ಕುಳಿತುಕೊಳ್ಳಬೇಕು ಅಥವಾ ದೊಡ್ಡ ಕಟ್ಟಡಗಳ ಚಾವಣಿಗೆ ಹೋಗಬೇಕು. ಅಲ್ಲಿಯೂ ಕೂಡ ಎಲ್ಲ ಸಂದರ್ಭದಲ್ಲಿ ಸಂಪರ್ಕ ಸಿಗುವುದಿಲ್ಲ’ ಎಂದು ಅನಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ‌

ತಮ್ಮ ಕೆಲವು ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.