
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ
ಲಾಹೋರ್: ಇದೇ ತಿಂಗಳು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧದ ಪಂದ್ಯವನ್ನು (ಫೆ.15) ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿದೆ.
ಇದೇ 7ರಂದು ಆರಂಭವಾಗುವ ಟೂರ್ನಿಯ ವೇಳಾಪಟ್ಟಿಯ ಪ್ರಕಾರ ಭಾರತ– ಪಾಕ್ ತಂಡಗಳ ನಡುವಣ ಪಂದ್ಯವು ಕೊಲಂಬೊದಲ್ಲಿ ಆಯೋಜನೆ ಗೊಂಡಿದೆ. ಆದರೆ ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ ಟೂರ್ನಿಯಿಂದ ಹೊರಹಾಕಿದ್ದನ್ನು ವಿರೋಧಿಸಿ ಪಾಕಿಸ್ತಾನವು ಪ್ರತಿಭಟನೆ ವ್ಯಕ್ತಪಡಿಸಿದೆ.
ಪಾಕ್ ಸರ್ಕಾರವು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಪ್ರಕಟಣೆಯಲ್ಲಿ, ‘ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅನುಮತಿ ನೀಡಲಾಗಿದೆ. ಆದರೆ ಫೆಬ್ರುವರಿ 15ರಂದು ಕೊಲಂಬೊದಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯಬಾರದು’ ಎಂದು ಉಲ್ಲೇಖಿಸಿದೆ.
ಇದರಿಂದಾಗಿ ಭಾರತ ತಂಡಕ್ಕೆ ಪೂರ್ಣ ಅಂಕಗಳು ದೊರೆಯಲಿವೆ. ಅಲ್ಲದೇ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಂಡ ವಿಧಿಸಬಹುದಾಗಿದೆ. ಪಾಕ್ ತಂಡವು ಫೆ. 7ರಂದು ನಡೆಯುವ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್, 10ರಂದು ಅಮೆರಿಕ ಮತ್ತು 18ರಂದು ನಮೀಬಿಯಾ ವಿರುದ್ಧ ಕೊಲಂಬೊದಲ್ಲಿಯೇ ಆಡಲಿದೆ.
ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್ ತಂಡಗಳ ನಡುವಣ ಪಂದ್ಯವು ಯಾವಾಗಲೂ ಹೆಚ್ಚು ರೋಚಕ ಮತ್ತು ಜನರನ್ನು ಸೆಳೆಯುತ್ತದೆ. ಜಾಗತಿಕ ಮಟ್ಟದಲ್ಲಿ ಮಾಧ್ಯಮಗಳ ಮೂಲಕ ಪ್ರೇಕ್ಷಕರ ಸಂಖ್ಯೆಯೂ ಉತ್ತುಂಗಕ್ಕೇರುತ್ತದೆ. ಪ್ರಾಯೋಜಕತ್ವ ಮತ್ತು ಪ್ರಸಾರಗಳಿಂದ ಹಣದ ಹೊಳೆಯೇ ಹರಿದುಬರುತ್ತದೆ. ಇದೀಗ ಪಂದ್ಯ ನಡೆಯದಿದ್ದರೆ ಆಗುವ ಆರ್ಥಿಕ ನಷ್ಟದ ಲೆಕ್ಕಾಚಾರ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.